ಬೆಂಗಳೂರು: ಲಾಟರಿ ಬಹುಮಾನ ಬಂದಿರುವುದಾಗಿ ಹೇಳಿ ನಗರದ ಮಹಿಳೆಯೊಬ್ಬರಿಂದ ₹1.38 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವೈಟ್ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವೈಟ್ಫೀಲ್ಡ್ ನಿವಾಸಿ ರೂಪಾ ಎಂಬುವರು ದೂರು ನೀಡಿದ್ದಾರೆ. ಆರೋಪಿ ಧೀರನ್ ಪ್ರತಾಪ್ ಸಿಂಗ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನ. 10ರಂದು ರೂಪಾ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಹೆಸರಿಗೆ ₹ 25 ಲಕ್ಷ ಲಾಟರಿ ಬಹುಮಾನ ಬಂದಿದೆ. ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರ ನೀಡಿದರೆ, ಹಣವನ್ನು ಖಾತೆಗೆ ವರ್ಗಾಯಿಸಲಾಗುವುದು’ ಎಂದಿದ್ದ. ಅದನ್ನು ನಂಬಿ ಮಹಿಳೆ, ವಾಟ್ಸ್ಆ್ಯಪ್ ಮೂಲಕ ಎಲ್ಲ ಮಾಹಿತಿ ಹಂಚಿಕೊಂಡಿದ್ದರು.’
‘ಎರಡನೇ ಬಾರಿ ಕರೆ ಮಾಡಿದ್ದ ವ್ಯಕ್ತಿ, ’ಬಹುಮಾನ ಪಾವತಿಸಲು ಶುಲ್ಕ ಪಾವತಿಸಬೇಕು’ ಎಂದಿದ್ದ. ಅದನ್ನೂ ನಂಬಿದ್ದ ಮಹಿಳೆ, ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 1.38 ಲಕ್ಷ ಸಂದಾಯ ಮಾಡಿದ್ದರು. ಹಣ ಜಮೆ ಆಗುತ್ತಿದ್ದಂತೆ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.