ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರರು ಪ್ರಜ್ಞಾವಂತರಾಗುವುದು ಮುಖ್ಯ: ಡಾ. ಎನ್‌. ಮಂಜುನಾಥ್‌

Last Updated 9 ಜೂನ್ 2022, 20:09 IST
ಅಕ್ಷರ ಗಾತ್ರ

ಬೆಂಗಳೂರು: ಕೇವಲ ಪದವಿಗಳನ್ನು ಪಡೆಯುವುದು ಮುಖ್ಯವಲ್ಲ. ಪದವೀಧರರು ಪ್ರಜ್ಞಾವಂತರಾಗಿ ರೂಪುಗೊಂಡರೆ ಸಮಾಜ ಮತ್ತು ದೇಶಕ್ಕೆ ಹೆಚ್ಚು ಒಳಿತಾಗುತ್ತದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಹೇಳಿದರು.

ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌ ಅವರ ಅಭಿನಂದನಾ ಸಮಾರಂಭದಲ್ಲಿ ‘ಸರಸ್ವತಿ ಪುತ್ರ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಆರೋಗ್ಯಕರ ಮನಃಸ್ಥಿತಿ ಹೊಂದಿರುವವರು ಒಂದು ಸಂಸ್ಥೆಯ ಆಡಳಿತದ ಚುಕ್ಕಾಣಿ ಹಿಡಿದರೆ ಆ ಸಂಸ್ಥೆಯೂ ಆರೋಗ್ಯಕರವಾಗಿ ಮುನ್ನಡೆಯುತ್ತದೆ. ಸಿಬ್ಬಂದಿಯೂ ಉತ್ತಮ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಂತಹ ಕೆಲಸವನ್ನು ವೇಣುಗೋಪಾಲ್‌ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಬ್ರ್ಯಾಂಡ್ ಅನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್‌ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್‌.ಸಿ. ಶರ್ಮ ಮಾತನಾಡಿ, ‘ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಶತ್ರುಗಳು ಹೆಚ್ಚಿರುತ್ತಾರೆ. ಅರ್ಹತೆ ಮತ್ತು ಪ್ರಾಮಾಣಿಕತೆಗಳೇ ವೇಣುಗೋಪಾಲ್‌ ಅವರಿಗೆ ಶತ್ರುಗಳಾದವು. ಐದು ಬಾರಿ ಸೇವೆಯಿಂದ ಅಮಾನತಾದರೂ ಎದೆಗುಂದದೇ ಕೆಲಸ ಮಾಡಿದ್ದರಿಂದ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೇರಲು ಅವರಿಗೆ ಸಾಧ್ಯವಾಯಿತು’ ಎಂದು ಹೇಳಿದರು.

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಐಎನ್‍ಎಸ್‍ಎ ಹಿರಿಯ ವಿಜ್ಞಾನಿ ಪ್ರೊ. ಎಲ್.ಎಂ.ಪಟ್ನಾಯಕ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ. ಕೊಟ್ರೇಶ್, ಕುಲಸಚಿವ (ಮೌಲ್ಯ ಮಾಪನ) ಪ್ರೊ. ಜೆ.ಟಿ.ದೇರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT