ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಬಿದ್ದ ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ತಾಲ್ಲೂಕಿನ ಹಂಗಳ ಹೋಬಳಿಯ ಗೋಪಾಲಪುರ, ಕುಣಗಳ್ಳಿ, ದೇವರಹಳ್ಳಿ,ಕಳ್ಳೀಪುರ, ಬೇರಂಬಾಡಿ ಸುತ್ತ ಮುತ್ತಲಿನ ತೋಟಗಳಲ್ಲಿ ಗೊನೆ ಕಟ್ಟಿದ್ದ ಬಾಳೆಗಿಡಗಳು ಮುರಿದುಬಿದ್ದಿವೆ.
‘ಫಸಲು ಕಟಾವು ಸಮಯದಲ್ಲಿ ಮಳೆ ಸುನಾಮಿಯಂತೆ ಎರಗಿದೆ. ಇದರಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದೆ. ಈ ಕುರಿತು ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ ನೀಡಲು ನಿರ್ಧರಿಸಿದ್ದೇವೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಗ್ರಾಮಗಳಲ್ಲಿ ಸಂಭವಿಸಿರುವ ನಷ್ಟದ ಕುರಿತು ಕಂದಾಯ ನಿರೀಕ್ಷಕ ಹಾಗು ಗ್ರಾಮ ಲೆಕ್ಕಿಗರು ವರದಿ ನೀಡುವಂತೆ ತಹಶೀಲ್ದಾರ್ ಕೆ.ಸಿದ್ದು ಸೂಚನೆ ನೀಡಿದ್ದಾರೆ.
‘ಇಲಾಖೆಯ ಸಿಬ್ಬಂದಿಗೆ ಬೆಳೆ ಹಾಳಾಗಿರುವ ಸ್ಥಳ ಮಹಜರು ನಡೆಸಲು ಸೂಚನೆ ನೀಡಲಾಗಿದೆ. ಇಲಾಖೆಯ ವತಿಯಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಪ್ರಕೃತಿ ವಿಕೋಪದಡಿ ಪರಿಹಾರ ನೀಡಲು ಅವಕಾಶವಿದೆ.ಶೇ 50 ರಷ್ಟು ಫಸಲು ನಾಶವಾಗಿದ್ದರೆ ಎಕರೆಗೆ ₹5,600 ಪರಿಹಾರ ಸಿಗಲಿದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ತಿಳಿಸಿದರು.