ಕೆ.ಆರ್.ಪುರ: ‘ನಾಡಿನ ನೆಲದ ಸಂಸ್ಕೃತಿ ಹಾಗೂ ಜನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು’ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.
ಜಾನಪದ ಪರಿಷತ್ನ ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
‘ಪಾಶ್ಚಿಮಾತ್ಯ ಸಾಂಸ್ಕೃತಿಕ ಪ್ರಭಾವದಿಂದ ಹಿರಿಯರು ಉಳಿಸಿಕೊಂಡು ಬಂದಿರುವ ಜನಪದ ಕಲೆ ನಶಿಸಿ ಹೋಗುತ್ತಿದೆ. ಇದು ಆಗಬಾರದು. ಇದನ್ನು ಉಳಿಸಿಕೊಂಡು ಹೋಗಬೇಕು. ಗ್ರಾಮೀಣ ಸೊಗಡು ಜನಪದ ಕಲೆ ಹಳ್ಳಿಗಳಲ್ಲಿ ಜೀವಂತವಾಗಿದೆ. ನಗರ ಪ್ರದೇಶಗಳಲ್ಲಿ ಕಣ್ಮರೆಯಾಗುತ್ತಿದೆ. ಜನಪದ ಕಲೆಯನ್ನು ಉಳಿಸುವ ಅಭಿಯಾನ ಮತ್ತು ಅರಿವು ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ಹಮ್ಮಿಕೊಳ್ಳಬೇಕು’ ಎಂದು ಹೇಳಿದರು.
ಪದಗ್ರಹಣ ಸಮಾರಂಭದಲ್ಲಿ ಹಿರಿಯ ಜಾನಪದ ಕಲಾವಿದರಾದ ವೆಂಕಟಮ್ಮ, ಪಿಳ್ಳ ಮುನಿಯಮ್ಮ, ಗೌರಮ್ಮ, ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಜಾನಪದ ಪರಿಷತ್ನ ರಾಜ್ಯ ಅಧ್ಯಕ್ಷ ಎಸ್.ಬಾಲಾಜಿ, ಬೆಂಗಳೂರು ಕೇಂದ್ರದ ಜಿಲ್ಲಾ ಅಧ್ಯಕ್ಷ ರಿಯಾಜ್ ಪಾಷ, ಕಾರ್ಯಾಧ್ಯಕ್ಷ ವೆ.ಅಜಿತ್ ಕುಮಾರ್, ಕ್ಷೇತ್ರ ಅಧ್ಯಕ್ಷ ಪಿ.ಎಸ್.ಸಾಲಿಮಠ, ಉಪಾಧ್ಯಕ್ಷರಾದ ಎಂ.ನರೇಂದ್ರ, ರವಿ, ಬಾಲಕೃಷ್ಣ, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.