ಮೈಸೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಅವರ ಪುತ್ರನೇನು ಕಡ್ಲೆಪುರಿ ತಿನ್ನುತ್ತಿದ್ದರಾ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದರು.
‘ಯಾವ ವಿಷಯದಲ್ಲೂ ಹಸ್ತಕ್ಷೇಪ ನಡೆಸದ ಬಿ.ವೈ.ವಿಜಯೇಂದ್ರ ವಿರುದ್ಧ, ರಾಜಕೀಯ ಕಾರಣಕ್ಕಾಗಿ ಈಗ ಸಿದ್ದರಾಮಯ್ಯ ಇಂಥ ಹೇಳಿಕೆ ನೀಡುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದ ವಿಚಾರ’ ಎಂದು ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಎಂ.ಟಿ.ಬಿ ನಾಗರಾಜ್ ಅವರಿಗೆ ಬಿಜೆಪಿಯಲ್ಲಿ ಯಾರೂ ಅಡ್ಡಗಾಲು ಹಾಕಿಲ್ಲ. ಈ ರೀತಿ ಹೇಳಿಯೇ ಅವರು ಸೋತಿದ್ದು’ ಎಂದು ಚಾಟಿ ಬೀಸಿದರು.
‘ಅಡಗೂರು ಎಚ್.ವಿಶ್ವನಾಥ್, ಎಂ.ಟಿ.ಬಿ ನಾಗರಾಜ್, ಆರ್. ಶಂಕರ್ ಸೇರಿದಂತೆ ಹಲವರು ವಿಧಾನಪರಿಷತ್ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂಬುದು ನಮ್ಮ ಆಗ್ರಹವೂ ಆಗಿದೆ’ ಎಂದರು.
ಸಾಧಕರಿಗೆ ಗೌರವ: ರಾಜ್ಯಕ್ಕೆ ಹಾಗೂ ಮೈಸೂರಿಗೆ ಅಪಾರ ಕೊಡುಗೆ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಡಿನ 10 ಗಣ್ಯರನ್ನು ಪ್ರತಿವರ್ಷ ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು. ಇದು ಈ ವರ್ಷದಿಂದಲೇ ಆರಂಭವಾಗಲಿದೆ ಎಂದು ತಿಳಿಸಿದರು.