ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತಿದ್ದರು ಎನ್ನಲಾದ ಜ್ಯೋತಿ ಲಕ್ಷ್ಮಿ (29) ಎಂಬುವರು ನೀರಿನ ಸಂಪಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜ್ಯೋತಿಲಕ್ಷ್ಮಿ ಸಾವಿನ ಬಗ್ಗೆ ಪೋಷಕರು ದೂರು ನೀಡಿದ್ದಾರೆ. ಆರೋಪಿಗಳಾಗಿರುವ ಪತಿ ಹೇಮಂತ್, ಅವರ ಸಂಬಂಧಿಕರಾದ ಆನಂದ್, ಜಯಶೀಲಾ, ರೇಖಾ ಹಾಗೂ ಜಯಲಕ್ಷ್ಮಮ್ಮ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಚನ್ನಪಟ್ಟಣದ ಜ್ಯೋತಿಲಕ್ಷ್ಮಿ ಅವರನ್ನು ಕೆಂಗೇರಿ ಗಾಂಧಿನಗರದ ನಿವಾಸಿ ಹೇಮಂತ್ ಅವರಿಗೆ 6 ತಿಂಗಳ ಹಿಂದಷ್ಟೇ ಮದುವೆ ಮಾಡಿಕೊಡಲಾಗಿತ್ತು. ಆರಂಭದ ದಿನದಲ್ಲಿ ಚೆನ್ನಾಗಿದ್ದ ಪತಿ ಹಾಗೂ ಅವರ ಮನೆಯವರು, ಇತ್ತೀಚೆಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲಾರಂಭಿಸಿದ್ದರು. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು.’
‘ಕಿರುಕುಳದಿಂದ ಬೇಸತ್ತಿದ್ದರು ಎನ್ನಲಾದ ಜ್ಯೋತಿಲಕ್ಷ್ಮಿ, ಮನೆ ಮುಂದಿರುವ ನೀರಿನ ಸಂಪಿಗೆ ಸೋಮವಾರ ಬೆಳಿಗ್ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಪತಿ ಹಾಗೂ ಅವರ ಮನೆಯವರೇ ಕಾರಣವೆಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಪತಿ ಹೇಮಂತ್ ಅವರನ್ನು ಬಂಧಿಸಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.