ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೆಯಲ್ಲಿ ದರೋಡೆ, 10 ಮಂದಿ ವಶಕ್ಕೆ

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಉದ್ಯಮಿಯ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ 10 ಮಂದಿಯನ್ನು ಪೀಣ್ಯ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.

‘ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳ ಕೈವಾಡವಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ’ ಎಂದು ಮೂಲಗಳು ಹೇಳಿವೆ. ‌

ಎಚ್‌ಎಂಟಿ ಲೇಔಟ್‌ನ ಎಸ್‌ಎನ್‌ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿಯ ಮಾಲೀಕ ಮನೋಹರ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, 700 ಗ್ರಾಂ ಚಿನ್ನಾಭರಣ ಹಾಗೂ ₹60 ಲಕ್ಷ ನಗದು ದೋಚಿ ಪರಾರಿಯಾಗಿದ್ದರು ಎಂದು ಮೂಲಗಳು ಹೇಳಿವೆ.

‘ಮನೆಯಲ್ಲಿ ಮನೋಹರ್ ಅವರ ಪತ್ನಿ ಸುಜಾತಾ ಹಾಗೂ ಅವರ ಪುತ್ರ ರೂಪೇಶ್ ಇದ್ದರು. ಆಗ, ಪೊಲೀಸ್ ಸೋಗಿನಲ್ಲಿ ಬಂದ ಆರೋಪಿಗಳು ಚಿನ್ನಾಭರಣ ದೋಚಿದ್ದರು. ಮನೋಹರ್ ಅವರ ಕುಟುಂಬದಲ್ಲಿ ಸಹೋದರರ ನಡುವೆ ಜಗಳವಿತ್ತು. ಇದನ್ನು ವಿಚಾರಿಸಲು ಪೊಲೀಸರು ಬಂದಿರಬಹುದು ಎಂದು ಆರಂಭದಲ್ಲಿ ಮನೆಯವರು ಭಾವಿಸಿದ್ದರು. ಮನೆಯೊಳಗೆ ಬಂದ ಆರೋಪಿಗಳು ಮಾರಕಾಸ್ತ್ರ ತೋರಿಸಿ ಹಲ್ಲೆಗೆ ಮುಂದಾಗಿದ್ದರು. ಅದಾದ ಮೇಲೆ ರೂಪೇಶ್ ಮೇಲೆ ಹಲ್ಲೆ ಮಾಡಿ, ಸುಜಾತಾ ಅವರ ಮಾಂಗಲ್ಯ ಸರ ಸಹಿತ ಚಿನ್ನಾಭರಣ ಹಾಗೂ ನಗದು ದೋಚಿದ್ದರು. ಮನೆಯಲ್ಲಿದ್ದ ಸಿಸಿ ಟಿ.ವಿ ಕ್ಯಾಮೆರಾದ ಡಿವಿಆರ್ ಅನ್ನು ಕದೊಯ್ದಿದ್ದಾರೆ’ ಎಂದು ಮೂಲಗಳು ಹೇಳಿವೆ.

ಆರೋಪಿಗಳ ಪೈಕಿ ನಾಗರಾಜ್‌ ಎಂಬಾತ ವರ್ಷದ ಹಿಂದೆ ಕಂಪನಿಯಲ್ಲಿ ಎರಡು ತಿಂಗಳು ಕೆಲಸ ಮಾಡಿದ್ದ. ಇತರೆ ಆರೋಪಿಗಳ ಜತೆಗೆ ಸಂಚು ರೂಪಿಸಿ ದರೋಡೆ ನಡೆಸಿರುವುದು ಪೊಲೀಸ್‌ ವಿಚಾರಣೆಯಲ್ಲಿ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT