ಪೀಣ್ಯ ದಾಸರಹಳ್ಳಿ: ಶಿಕ್ಷಣದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಸಮುದಾಯ ತನ್ನ ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಮಾಜಿ ಅಡ್ವೊಕೇಟ್ ಜನರಲ್ ಬಿ. ವಸುದೈವ ಆಚಾರ್ಯ ಕರೆ ನೀಡಿದರು.
ಸಿಡೇದಹಳ್ಳಿಯ ಸೌಂದರ್ಯ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ‘ದೀಕ್ಷಾರಂಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತದ ಸಂವಿಧಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವಿರಬೇಕು. ಪ್ರಮುಖ ತೀರ್ಪುಗಳನ್ನು ಅಧ್ಯಯನ ಮಾಡುವ ಜೊತೆಗೆ ವಕೀಲ ವೃತ್ತಿಯಲ್ಲಿ ತೊಡಗುವವರು, ಮಾದರಿ ನಡಾವಳಿ ಸಂಹಿತೆಯನ್ನು ಪರಿಪಾಲಿಸಬೇಕು. ಕಾನೂನು ವೃತ್ತಿಯಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು’ ಎಂದರು.
ಸೌಂದರ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೌಂದರ್ಯ ಪಿ.ಮಂಜಪ್ಪ ಮಾತನಾಡಿ, ‘ಕಾನೂನು ವೃತ್ತಿ ಅತ್ಯಂತ ಮಹತ್ವದ್ದಾಗಿದ್ದು, ಉತ್ತಮ ರೀತಿಯಲ್ಲಿ ಕಾನೂನು ಶಿಕ್ಷಣ ಪಡೆದು ನೊಂದ ಜನರಿಗೆ ನ್ಯಾಯ ಒದಗಿಸಲು ವಿದ್ಯಾರ್ಥಿ ಸಮುದಾಯ ಮುಂದಾಗಬೇಕು’ ಎಂದರು.
ಶಿಕ್ಷಣ ಸಂಸ್ಥೆಯ ಸಿಇಒ ಎಂ.ಕೀರ್ತನ್ಕುಮಾರ್, ಟ್ರಸ್ಟಿ ವರುಣ್ಕುಮಾರ್, ಸೌಂದರ್ಯ ಶಿಕ್ಷಣ ಸಂಸ್ಥೆಯ ವಿಜ್ಞಾನ ಮತ್ತು ಆಡಳಿತ ನಿರ್ವಹಣೆ ವಿಭಾಗದ ಪ್ರಾಂಶುಪಾಲ ಬಿ.ಎ.ವಸು, ಕಾನೂನು ಕಾಲೇಜಿನ ಪ್ರಾಂಶುಪಾಲ ಬಿ.ಪಿ. ಮಹೇಶ್, ಸಹಾಯಕ ಪ್ರಾಧ್ಯಾಪಕ ಹನುಮಂತೇಗೌಡ ಉಪಸ್ಥಿತರಿದ್ದರು.