ಕೆ.ಆರ್.ಪುರ: ಮಹರ್ಷಿ ವಾಲ್ಮೀಕಿ ಅವರ ರಾಮಾಯಣದ ವ್ಯಕ್ತಿತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಎನ್.ತೇಜಸ್ ಕುಮಾರ್ ತಿಳಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
‘ರಾಮಾಯಣ ಸಾರ್ವಕಾಲಿಕವಾದ ಸತ್ಯ ಮಾಹಿತಿಯನ್ನು ಒಳಗೊಂಡಿದೆ. ರಾಮಾಯಣದಲ್ಲಿ ಬರುವ ಸನ್ನಿವೇಶಗಳು ಮತ್ತು ಪಾತ್ರಗಳು ಪರಿಣಾಮಕಾರಿಯಾಗಿ ಹೆಚ್ಚು ಗಮನ ಸೆಳೆಯುತ್ತವೆ. ಪ್ರಸ್ತುತ ವೈಜ್ಞಾನಿಕ ಜಗತ್ತಿನಲ್ಲಿ ವಾಟ್ಸ್ ಆ್ಯಪ್, ಫೇಸ್ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿಹೋಗಿದ್ದೇವೆ. ಸಿದ್ಧಾಂತಗಳನ್ನು ಮರೆತು ಹೋಗಿದ್ದೇವೆ’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ‘ರಾಮಾಯಣದ ಮಾರ್ಗದರ್ಶಿ ಸೂತ್ರಗಳನ್ನು ನಾವೆಲ್ಲ ಅನುಸರಿಸುವ ಮೂಲಕ ರಾಮರಾಜ್ಯವನ್ನು ಕಾಣಬೇಕು’ ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಚಂದ್ರಶೇಖರ್, ವಾಲ್ಮೀಕಿ ಸಮುದಾಯದ ಮುಖಂಡರಾದ ಜಿ.ಕೆ. ನಾಗೇಶ್, ಆಂಜಿನಪ್ಪ, ನಾಗರಾಜ್, ರಾಮಚಂದ್ರಪ್ಪ, ಶಾಂತಕುಮಾರ್ ಇದ್ದರು.