ಬೆಂಗಳೂರು: ಸಾರ್ವಜನಿಕರು ಬೇಸಿಗೆ ಬೇಗುದಿಯ ಜೊತೆಗೆ ತರಕಾರಿ ಬೆಲೆ ಏರಿಕೆ ಬಿಸಿಯನ್ನೂ ಅನುಭವಿಸಬೇಕಿದೆ. ತರಕಾರಿ ದರ ಹೆಚ್ಚಳವಾಗಿದ್ದು, ಬೀನ್ಸ್ ದರ ಬರೋಬ್ಬರಿ ಶತಕ ತಲುಪಿದೆ.
ಅಂತರ್ಜಲ ಪಾತಾಳಕ್ಕೆ ಕುಸಿದ ಕಾರಣ ನೀರಿನ ಕೊರತೆಯಿದೆ. ಕೆಲವೆಡೆ ನೀರಿದ್ದರೂ ಅಧಿಕ ತಾಪಮಾನದ ಕಾರಣ ಗಿಡಗಳಲ್ಲಿ ಹೂವು ಕಾಯಿ ಉದುರುತ್ತಿವೆ.ಆದ್ದರಿಂದ ಇಳುವರಿ ಕಡಿಮೆಯಾಗಿ, ಆವಕದ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ.ಸಮಾರಂಭಗಳೂ ಹೆಚ್ಚಾದ ಕಾರಣ ತರಕಾರಿ ಬೇಡಿಕೆ ಸಹ ಹೆಚ್ಚಾಗಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ವಿವರಿಸುತ್ತಾರೆ.
ಪೂರೈಕೆ ವ್ಯತ್ಯಯವಾಗಿದ್ದರಿಂದಮೂರು ವಾರಗಳಿಂದಲೂ ಬೀನ್ಸ್ ದರ ₹100ರಲ್ಲೇ ಮುಂದುವರೆದಿದೆ. ಇನ್ನೊಂದೆಡೆ ಸದಾ ಕೈಗೆಟುಕುವ ದರದಲ್ಲಿ ಸಿಗುತ್ತಿದ್ದಟೊಮೆಟೊ ಬೆಲೆಯಲ್ಲಿಯೂ ಏರಿಕೆಯಾಗಿದೆ. 2 ವಾರಗಳಿಂದ ಈಚೆಗೆ ಪ್ರತಿನಿತ್ಯ ಟೊಮೆಟೊ ದರ ನಿರಂತರವಾಗಿ ಹೆಚ್ಚಳವಾಗುತ್ತಿದೆ.
ಒಂದು ವಾರದ ಹಿಂದೆ ಟೊಮೆಟೊ ₹15–₹20ಗೆ ಮಾರಾಟವಾಗುತ್ತಿತ್ತು. ಆದರೆ ನಗರದ ಕೆಲ ಮಾರುಕಟ್ಟೆಗಳಲ್ಲಿ ಸೋಮವಾರ ₹40ಗೆ ಮಾರಾಟವಾಗಿದೆ. ಸೂಪರ್ ಮಾರ್ಕೆಟ್ಗಳಲ್ಲಿಯೂ ಅದರ ಬೆಲೆಯಲ್ಲಿ ಹೆಚ್ಚಳವಾಗಿದೆ.
ಸಬ್ಬಸಿಗೆ, ಮೆಂತ್ಯ, ಕೊತ್ತಂಬರಿ, ಕರಿಬೇವು ಸೊಪ್ಪುಗಳ ಮಧ್ಯೆದರ ಏರಿಕೆ ಪೈಪೋಟಿ ಏರ್ಪಟ್ಟಿದೆ. ವ್ಯಾಪಾರಿಗಳುಮೊದಲು₹10 ಕೊಟ್ಟರೇ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಸೊಪ್ಪನ್ನು ಕೊಡುತ್ತಿದ್ದರು. ಕೊತ್ತಂಬರಿ ಸೊಪ್ಪಿನ ದರ ಕೆ.ಜಿಗೆ ₹78 ಆಗಿರುವುದರಿಂದ ಕರಿಬೇವು ಸೊಪ್ಪು ಕೊಡುವುದನ್ನು ನಿಲ್ಲಿಸಲಾಗಿದೆ.
ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದಿದ್ದ ಗೃಹಿಣಿ ಸವಿತಾ ಅವರನ್ನು ಮಾತನಾಡಿಸಿದಾಗ, ‘ವಾರದ ಹಿಂದೆ ಟೊಮೆಟೊ ದರ ₹15 ಇತ್ತು. ಈಗ ಏಕಾಏಕಿ ₹40 ಆಗಿದೆ. ಮೊದಲು 5 ಕೆ.ಜಿ ಒಮ್ಮೆಗೆ ತೆಗೆದುಕೊಂಡು ಹೋಗುತ್ತಿದ್ದೆ, ದರ ಹೆಚ್ಚಳದ ಕಾರಣ 2 ಕೆ.ಜಿ ಮಾತ್ರ ತೆಗೆದುಕೊಂಡು ಹೋಗುತ್ತಿದ್ದೇನೆ. ಸೊಪ್ಪಿನ ದರವೂ ಹೆಚ್ಚಳವಾಗಿದೆ. ಇದು ಹೀಗೆ ಮುಂದುವರಿದರೆ ಜೀವನ ನಿರ್ವಹಣೆ ತುಂಬಾ ಕಷ್ಟವಾಗಲಿದೆ’ ಎಂದು ಹೇಳಿದರು.