ಬೆಂಗಳೂರು: ಉಪಚುನಾವಣೆ ನಡೆಯುತ್ತಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಮಂದಗತಿಯಲ್ಲೇ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ಬಳಿಕ ಚುರುಕುಗೊಳ್ಳುವ ನಿರೀಕ್ಷೆ ಇದೆ.
ಕೆಲವು ಖಾಸಗಿ ಕಂಪನಿಗಳು, ಕೈಗಾರಿಕೆಗಳು 3 ಗಂಟೆಯವರೆಗೆ ಕೆಲಸಕ್ಕೆ ಬರಬೇಕು ಎಂದು ಸಿಬ್ಬಂದಿಗೆ ತಿಳಿಸಿವೆ. ಹೀಗಾಗಿ 3 ಗಂಟೆಯ ಬಳಿಕ ಮತದಾನ ಪ್ರಮಾಣ ಹೆಚ್ಚಬಹುದು ಎಂದು ಹಲವು ಮತಗಟ್ಟೆಗಳಲ್ಲಿ ಸಿಬ್ಬಂದಿ ಹೇಳಿದರು.
ಮಧ್ಯಾಹ್ನ 2 ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ 30ರಷ್ಟು ಮತದಾನ ಮಾತ್ರ ಆಗಿದೆ. ಇದು ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಕಂಗಾಲುಗೊಳಿಸಿದೆ.
ಶಿವಾಜಿನಗರ: ಶಿವಾಜಿನಗರ ಕ್ಷೇತ್ರದಲ್ಲಿ ಬಿಸಿಲೇರುತ್ತಿದ್ದಂತೆಯೇ ಮತದಾನವೂ ಚುರುಕುಗೊಂಡಿದೆ. ಮಧ್ಯಾಹ್ನ 2 ಗಂಟೆಯವರೆಗೆ ಇಲ್ಲೂ ಶೇ 30ರಷ್ಟು ಮತದಾನ ಮಾತ್ರ ಆಗಿದೆ. ಆದರೆ ಇಲ್ಲಿ ಸಂಜೆ ಹೊತ್ತು ಮತದಾನ ಬಿರುಸುಗೊಳ್ಳುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಹೀಗಾಗಿ ಒಟ್ಟಾರೆ ಮತದಾನ ಪ್ರಮಾಣ ಶೇ 50ರ ಗಡಿ ದಾಟಬಹುದೇ ಎಂಬ ಸಂಶಯ ಮನೆಮಾಡಿದೆ.