ಬೆಂಗಳೂರು: ನಗರದಲ್ಲಿ ಜಲಮಂಡಳಿ ಕಾಯ್ದೆ ಉಲ್ಲಂಘಿಸಿ, ತ್ಯಾಜ್ಯ ನೀರನ್ನು ಅಕ್ರಮವಾಗಿ ಒಳಚರಂಡಿ ಹಾಗೂ ಮಳೆನೀರು ಕಾಲುವೆಗೆ ಹರಿಸುತ್ತಿರುವವರಿಗೆ ಮೇ 1ರಿಂದ ನೋಟಿಸ್ ಜಾರಿ ಮಾಡುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಲಮಂಡಳಿಯಿಂದ ಸಂಪರ್ಕ ಪಡೆಯದೆ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಮಳೆ ನೀರು ಕಾಲುವೆಗೂ ತ್ಯಾಜ್ಯ ಬಿಡಲಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ಒಳಚರಂಡಿ ಸಂಪರ್ಕವನ್ನು ಅಧಿಕೃತಗೊಳಿಸಲು ಮೇ 7ರವರೆಗೆ ಅವಕಾಶ ನೀಡಲಾಗಿದೆ ಎಂದರು.
ಒಂದು ವಾರದಿಂದ ಜಲಮಂಡಳಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ 528 ಕಟ್ಟಡಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಇವುಗಳಲ್ಲಿ 446 ಕಡೆಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುತ್ತಿರುವುದು ಪತ್ತೆಯಾಗಿದೆ. ಇದರಲ್ಲಿ 221 ಸಂಪರ್ಕಗಳನ್ನು ಅಗತ್ಯ ಶುಲ್ಕ ಭರಿಸಿಕೊಂಡು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇನ್ನೂ 390 ಸಂಪರ್ಕಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
20ಕ್ಕೂ ಹೆಚ್ಚು ಫ್ಲ್ಯಾಟ್ಗಳನ್ನು ಹೊಂದಿರುವ ವಸತಿ ಸಮುಚ್ಚಯಗಳು, ಹೋಟೆಲ್ಗಳು, ವಾಣಿಜ್ಯ ಕಟ್ಟಡಗಳನ್ನು ಆದ್ಯತೆಯ ಮೇರೆಗೆ ಪರಿಶೀಲನೆ ನಡೆಸಬೇಕು. ಮೇ 7ರ ನಂತರವೂ ಒಳಚರಂಡಿ ಸಂಪರ್ಕವನ್ನು ಅಧಿಕೃತಗೊಳಿಸಲು ಅರ್ಜಿ ಸಲ್ಲಿಸದೇ ಇರುವಂತವರ ಮೇಲೆ ಕ್ರಮ ಕೈಗೊಳ್ಳಬೇಕು. ಅವರು 15 ದಿನಗಳ ಒಳಗಾಗಿ ಜಲಮಂಡಳಿಯ ಅಧಿಕೃತ ಸಂಪರ್ಕ ಪಡೆಯದೇ ಇದ್ದಲ್ಲಿ ಅವರ ಮೇಲೆ ಕಾನೂನಿನ ಅನ್ವಯ ಕ್ರಮಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಎಂಜಿನಿಯರ್ ಸುರೇಶ, ಮುಖ್ಯ ಎಂಜಿನಿಯರ್ಗಳಾದ ಎಲ್.ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ್ ಉಪಸ್ಥಿತರಿದ್ದರು.