ಹೆಸರಘಟ್ಟ: ಮನೆ ಬಳಿಯ ಖಾಲಿ ಜಾಗದಲ್ಲಿ ಮೇಯುತ್ತಿದ್ದ 9 ಹಸುಗಳ ಮೇಲೆ ಆ್ಯಸಿಡ್ ಎರಚಿ ಗಾಯ ಮಾಡಿದ್ದ ಆರೋಪದಡಿ ಜೋಸೆಫ್ ಗ್ರೇಸ್ (76) ಅವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದು, ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದ್ದ ಘಟನೆ ಬಗ್ಗೆ ಸೋಲದೇವನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಸ್ಥಳೀಯ ನಿವಾಸಿಯಾದ ಮಹಿಳೆಯು ಹಸುಗಳ ಮೇಲೆ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಆ್ಯಸಿಡ್ ಎರಚಿದ್ದರು. 15 ದಿನಗಳ ಹಿಂದೆ ನಡೆದಿದ್ದ ಘಟನೆ ಸಂಬಂಧ ಹಸುಗಳ ಮಾಲೀಕರು ಹೇಳಿಕೆ ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ಮಹಿಳೆಯನ್ನು ಬಂಧಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಜಾಮೀನು ಸಹಿತ ಪ್ರಕರಣ ಇದಾಗಿದೆ. ಜೊತೆಗೆ, ಮಹಿಳೆಗೂ ಹೆಚ್ಚು ವಯಸ್ಸಾಗಿದೆ. ಹೀಗಾಗಿ, ಠಾಣೆ ಜಾಮೀನು ಮೇಲೆ ಬಿಟ್ಟು ಕಳುಹಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಲಾಗಿದೆ’ ಎಂದು ತಿಳಿಸಿವೆ.
ರೋಗವೆಂದು ಸುಮ್ಮನಾಗಿದ್ದ ಮಾಲೀಕರು: ‘9 ಹಸುಗಳ ಮೇಲೆ ಗಾಯಗಳಾಗಿದ್ದವು. ಕೆಲ ಹಸುಗಳು ಹಾಲು ಸಹ ಕೊಡುತ್ತಿರಲಿಲ್ಲ. ರೋಗವೆಂದು ತಿಳಿದಿದ್ದ ಮಾಲೀಕರು, ಕೆಲ ಔಷಧಿಗಳನ್ನು ಹಚ್ಚಿದ್ದರು. ಆದರೆ, ಆ್ಯಸಿಡ್ ಎರಚಿದ್ದ ಸಂಗತಿ ಮಾಲೀಕರಿಗೆ ಗೊತ್ತಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆ್ಯಸಿಡ್ ಎರಚಿದ್ದ ಬಗ್ಗೆ ಇತ್ತೀಚೆಗಷ್ಟೇ ಮಾಲೀಕರಿಗೆ ಗೊತ್ತಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಮಾಲೀಕರ ಮೇಲೆಯೇ ಮಹಿಳೆ ಹರಿಹಾಯ್ದಿದ್ದರು’ ಎಂದು ತಿಳಿಸಿವೆ.