ಬೆಂಗಳೂರು: ನಗರದ ವಿವಿಧೆಡೆ ಶುಕ್ರವಾರ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು. ಪತ್ರಿಕೆಗಳ ವಿತರಕರು, ಏಜೆಂಟರು, ಡೀಲರ್ಗಳು ಸಂಭ್ರಮದಿಂದ ಪಾಲ್ಗೊಂಡರು.
ಯಲಹಂಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಎಸ್.ಆರ್. ವಿಶ್ವನಾಥ್, ‘ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಪತ್ರಿಕಾ ವಿತರಕರು ಧೈರ್ಯದಿಂದ ಕೆಲಸ ಮಾಡಿದ್ದಾರೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.
ಯಲಹಂಕ ತಹಶೀಲ್ದಾರ್ ರಘುಮೂರ್ತಿ ಅವರು ಹಿರಿಯ ಪತ್ರಿಕಾ ವಿತರಕರಾದ ಜಯರಾಮ್, ಮಲ್ಲಿಕಾರ್ಜುನ್ ಹಾಗೂ ಶಂಕರ್ ಅವರನ್ನು ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗಣೇಶ್, ಪ್ರೇರಣಾ, ನೀರಜ್ ಅವರನ್ನೂ ಸನ್ಮಾನಿಸಲಾಯಿತು.
ಸ್ಥಳೀಯ ಪಾಲಿಕೆ ಸದಸ್ಯ ಎಂ.ಸತೀಶ್, ವಿವಿಎಲ್ಒ ಒಕ್ಕೂಟದ ಅಧ್ಯಕ್ಷೆ ಹೇಮಲತಾ, ನಿವೃತ್ತ ಸಂಚಾರ ಪೊಲೀಸ್ ಅಧಿಕಾರಿ ನಾರಾಯಣಸ್ವಾಮಿ, ನಿವೃತ್ತ ಶಿಕ್ಷಕ ಲಕ್ಷ್ಮೀಪತಯ್ಯ ಹಾಗೂ ಇತರರು ಹಾಜರಿದ್ದರು.