ಬೆಂಗಳೂರು: ಅತಿ ಕಡಿಮೆ ದರದಲ್ಲಿ ಅಕ್ಕಿ ನೀಡುವ ಯೋಜನೆ ಕೇವಲ ರಾಜಕೀಯ ನಾಟಕ. ಈ ಯೋಜನೆಗೆ ಮೀಸಲಿಟ್ಟ 4400 ಕೋಟಿ ರೂಪಾಯಿಗಳನ್ನು ಕೃಷಿ ಉತ್ಪಾದನೆ ಹೆಚ್ಚಿಸಲು ಬಳಸಬೇಕಾಗಿತ್ತು ಎಂದು ಜೆಡಿಎಸ್ನ ಎಂ.ಸಿ. ನಾಣಯ್ಯ ಬುಧವಾರ ವಿಧಾನಪರಿಷತ್ನಲ್ಲಿ ಸಲಹೆ ನೀಡಿದರು.
ಪಡಿತರ ವಿತರಣಾ ವ್ಯವಸ್ಥೆಯನ್ನು ಕಡ್ಡಾಯವಾಗಿ ಮುಂದುವರಿಸಬೇಕು. ಈ ಬಗ್ಗೆ ವಿರೋಧವಿಲ್ಲ. ಆದರೆ, ದುಡಿಯುವ ಕೈಗಳನ್ನು ನಿಷ್ಕ್ರೀಯ ಮಾಡಬಾರದು. ಇದರಲ್ಲಿ ಸತ್ಯವಿಲ್ಲ ಎಂದು ತಿಳಿಯಬಾರದು. ಅಕ್ಕಿಗೆ ನೀಡುವ ಅನುದಾನವನ್ನು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಖರೀದಿಗೆ ನೀಡುವ ಮೂಲಕ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು ಎಂದು ಪ್ರತಿಪಾದಿಸಿದರು.
`ಒಂದು ರೂಪಾಯಿಗೆ ಒಂದು ಕೆಜಿಯಂತೆ 30 ಕೆಜಿ ಅಕ್ಕಿ ನೀಡುವುದರಿಂದ ಬಡ ಕುಟುಂಬಗಳಿಗೆ ಆಗುವ ಲಾಭ ಏನು? ಬಡತನ ಕಡಿಮೆಯಾಗುತ್ತದೆಯೇ? ಇದರ ಬದಲಾಗಿ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡಬಹುದಿತ್ತು. ಕೇವಲ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಎಲ್ಲ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ' ಎಂದು ನುಡಿದರು.