ಬೆಂಗಳೂರು: ಅನರ್ಹ ಪಡಿತರದಾರರ ಪತ್ತೆಗೆ ‘ಬಹುಮಾನ ಯೋಜನೆ’ ಜಾರಿಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅನರ್ಹ ಬಿಪಿಎಲ್ ಪಡಿತರದಾರರು ತಾವಾಗಿಯೇ ಪಡಿತರ ಚೀಟಿಯನ್ನು ಇಲಾಖೆಗೆ ಹಿಂತಿರುಗಿಸುವಂತೆ ಕೋರಲಾಗಿದೆ.
ಕೆಲವರು ಇನ್ನೂ ಹಿಂತಿರುಗಿಸಿಲ್ಲ. ಅಂಥವರನ್ನು ಪತ್ತೆ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಇದಕ್ಕಾಗಿಯೇ ಇಲಾಖೆಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಬಹುಮಾನ ನೀಡುವ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದು ವಿವರಿಸಿದರು.
ಈಗಾಗಲೇ 13 ಲಕ್ಷ ಕಾರ್ಡುಗಳನ್ನು ಅರ್ಹರಿಗೆ ವಿತರಿಸಲಾಗಿದೆ. 4.50ಲಕ್ಷ ಕಾರ್ಡುಗಳು ವಿತರಣೆಗೆ ಸಿದ್ಧವಾಗಿದೆ. 19 ಲಕ್ಷ ಅರ್ಜಿಗಳನ್ನು ಮಾಹಿತಿಯ ಕೊರತೆಯಿಂದ ತಡೆಹಿಡಿಯಲಾಗಿದೆ 7 ಲಕ್ಷ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೀದರ್ನಲ್ಲಿ ಪಡಿತರ ಚೀಟಿಯನ್ನು ಗಿರವಿ ಇಟ್ಟ ಪ್ರಕರಣ ನಡೆದಿದೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು, ‘ಅಂಥ ಒಂದೆರಡು ಪ್ರಕರಣಗಳು ಇರಬಹುದು. ಆದರೆ ಅದಕ್ಕೂ ಇಲಾಖೆಗೂ ಸಂಬಂಧವಿಲ್ಲ’ ಎಂದರು.