ಬೆಂಗಳೂರು: ವಿಧಾನಸಭಾ ಚುನಾವಣೆ ಪ್ರಚಾರದ ಸಲುವಾಗಿ ಫ್ಲೆಕ್ಸ್ಗಳನ್ನುಅಳವಡಿಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರ ವಿರುದ್ಧ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫ್ಲೆಕ್ಸ್ಗಳನ್ನು ಹಾಗೂ ಅದನ್ನು ಸಾಗಿಸಲು ಬಳಸಿದ್ದ ಆಟೊ ರಿಕ್ಷಾವನ್ನು ಜಪ್ತಿ ಮಾಡಿದ್ದಾರೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ರೇಣುಕಾ ವಿಶ್ವನಾಥ್ ಭಾವಚಿತ್ರವಿದ್ದ ಫ್ಲೆಕ್ಸ್ಗಳನ್ನು ಸಿದ್ಧಾರ್ಥ ಕಾಲೊನಿ ಕ್ರಾಸ್ನಲ್ಲಿರುವ ವಿದ್ಯುತ್ ಕಂಬಗಳಿಗೆ ಭಾನುವಾರ ನಸುಕಿನಲ್ಲಿ ಕಟ್ಟಲಾಗಿತ್ತು. ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದ ಹೆಡ್ ಕಾನ್ಸ್ಟೆಬಲ್ ಸ್ಥಳಕ್ಕೆ ಹೋಗಿ ವಿಚಾರಿಸಿದ್ದರು. ‘ಚುನಾವಣಾಧಿಕಾರಿ ಅನುಮತಿ ಇಲ್ಲದೆ ಫ್ಲೆಕ್ಸ್ ಕಟ್ಟುವಂತಿಲ್ಲ’ ಎಂದು ಸೂಚಿಸಿದ್ದರು.
‘ಯಾರ ಅನುಮತಿಯೂ ಬೇಕಿಲ್ಲ ಎಂದು ವಾದಿಸಿದ್ದ ಆರೋಪಿಗಳು, ಹೆಡ್ ಕಾನ್ಸ್ಟೆಬಲ್ ಜತೆ ಜಗಳವಾಡಿದ್ದರು. ನಂತರ, ಆಟೊ (ಕೆಎ 02 ಎಎ 3158) ಹಾಗೂ ಅದರಲ್ಲಿದ್ದ
ಫ್ಲೆಕ್ಸ್ಗಳನ್ನು ಜಪ್ತಿ ಮಾಡಿ ಠಾಣೆಗೆ ತಂದಿದ್ದೇವೆ’ ಎಂದು ಪೊಲೀಸರು ತಿಳಿಸಿದರು.
ಕಾರ್ಯಕರ್ತರಾದ ಅಬ್ದುಲ್ ಖಾದರ್, ಮೊಹಮ್ಮದ್ ಇಕ್ಬಾಲ್, ಚಾಲಕ ಸೈಯದ್ ಬಾಬು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.