ಬೆಂಗಳೂರು: ಕಸ ಸುರಿದು ಬೆಂಕಿ ಹಚ್ಚುತ್ತಿರುವುದನ್ನು ವಿರೋಧಿಸಿ ಕನಕಪುರ ಮುಖ್ಯರಸ್ತೆಯ ಕಗ್ಗಲಿಪುರ ನಿವಾಸಿಗಳು ಶನಿವಾರ ಮುಖಗವಸು ಧರಿಸಿ ಮಾನವ ಸರಪಳಿ ನಿರ್ಮಿಸಿದರು.
‘ಕಗ್ಗಲಿಪುರ ಗ್ರಾಮ ಪಂಚಾಯಿತಿ ಸಿಬ್ಬಂದಿಯು ಖಾಲಿ ಜಾಗಗಳಲ್ಲಿ 20ರಿಂದ 30 ಲಾರಿಗಳಷ್ಟು ಕಸವನ್ನು ಸುರಿದಿದ್ದಾರೆ. ಈ ಬಗ್ಗೆ ಎರಡು ವರ್ಷಗಳಿಂದ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡುತ್ತಿದ್ದೇವೆ. ಆದರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ತನಿಶಾ ಚೌಹಾನ್ ದೂರಿದರು.
ಆರ್ಟ್ ಆಫ್ ಲಿವಿಂಗ್ ಕೇಂದ್ರದಿಂದ ಬ್ರಿಗೇಡ್ ಮೆಡೋಸ್ ಅಪಾರ್ಟ್ಮೆಂಟ್ವರೆಗೆ ಕಸ ಸುರಿಯಲಾಗುತ್ತಿದೆ. ಕೆಲವರು ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದ ಈ ಭಾಗದಲ್ಲಿ ನೆಲೆಸಿರುವ ಸುಮಾರು 3,000 ಮಂದಿಗೆ ತೊಂದರೆ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.
‘ಮಾನವ ಸರಪಳಿ ನಿರ್ಮಿಸುವ ವೇಳೆಗಾಗಲೇ ಕಸ ತುಂಬಿದ್ದ ಎರಡು ಲಾರಿಗಳು ಸ್ಥಳಕ್ಕೆ ಬಂದವು. ಚಾಲಕರು ನಮ್ಮನ್ನು ನೋಡಿ ಲಾರಿಗಳನ್ನು ಬೇರೆಡೆಗೆ ತಿರುಗಿಸಿದರು’ ಎಂದು ದೂರಿದರು.
ಕಸ ಹಾಕಲು ಪ್ರತ್ಯೇಕ ಶೆಡ್ ನಿರ್ಮಿಸಲಾಗುತ್ತದೆ. ಕಸ ಸುರಿಯುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಅನಧಿಕೃತವಾಗಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ನಿವಾಸಿಗಳು ‘ಕ್ರೈ ಲೌಡ್’ ಎಂಬ ಫೇಸ್ಬುಕ್ ಖಾತೆಯನ್ನು ತೆರೆದಿದ್ದು, ಪ್ರತಿದಿನದ ಬೆಳವಣಿಗೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.