ಬೆಂಗಳೂರು: ಕಾರಾಗೃಹಕ್ಕೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಭೇಟಿ... ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಜನಾರ್ದನ ರೆಡ್ಡಿ ಅವರಿಗೆ ಕೈ ಕುಲುಕಿ ಅಭಿನಂದನೆ...ಎಲ್ಲರ ಮುಖದಲ್ಲೂ ಮಂದಹಾಸ...
ಗೊಂದಲ ಬೇಡ! ಇದು ಶನಿವಾರ ನಗರದ ಮೌರ್ಯ ವೃತ್ತದಲ್ಲಿ ಕೆಪಿಸಿಸಿ ಹಮ್ಮಿಕೊಂಡಿದ್ದ ವಿನೂತನ ಪ್ರತಿಭಟನೆಯ ದೃಶ್ಯಗಳು. ಒಂದೆಡೆ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ, ಮತ್ತೊಂದೆಡೆ ಭ್ರಷ್ಟಾಚಾರದ ವಿರುದ್ಧ ಅಡ್ವಾಣಿ ಅವರು ನಡೆಸುತ್ತಿರುವ ಜನಚೇತನ ರಾಜ್ಯ ಪ್ರವೇಶಿಸುತ್ತಿದೆ. ಇವೆರಡೂ ಬಿಜೆಪಿಯ ಇಬ್ಬಗೆ ನೀತಿಯ ಧ್ಯೋತಕವಾಗಿವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಜೈಲಿನ ಮಾದರಿ ಒಳಗಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರ ಮುಖವಾಡಧಾರಿಗಳಿಗೆ ಅಡ್ವಾಣಿ, ಸಂಸದ ಅನಂತಕುಮಾರ್ ಮುಖವಾಡ ಹೊತ್ತವರು ಗುಲಾಬಿ ಹೂ ಕೊಟ್ಟು ಕೈ ಕುಲುಕಿದರು. `ಅಡ್ವಾಣಿ~ ಭದ್ರತೆಗೆ ಸ್ಟೆನ್ಗನ್ ಹಿಡಿದಿದ್ದ ಪಾತ್ರಧಾರಿಯೊಬ್ಬರು ಕೂಡ ನೋಡುಗರ ಗಮನ ಸೆಳೆದರು. ಮಾಜಿ ಮೇಯರ್ ರಾಮಚಂದ್ರಪ್ಪ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.