ಬೆಂಗಳೂರು: `ಹಿರಿಯ ಚಿತ್ರ ಕಲಾವಿದ ಕೆ.ಕೆ.ಹೆಬ್ಬಾರ್ ಅವರು ತಾವು ಬಹುದೊಡ್ಡ ಕಲಾವಿದರಾಗಿದ್ದರೂ ಸಹ ನನ್ನಂಥ ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು~ ಎಂದು ಹಿರಿಯ ಚಿತ್ರ ಕಲಾವಿದ ಎಸ್.ಜಿ.ವಾಸುದೇವ್ ನುಡಿದರು.
ಕೆ.ಕೆ.ಹೆಬ್ಬಾರ್ ಅವರ ಜನ್ಮಶತಾಬ್ದಿ ಅಂಗವಾಗಿ ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ (ಎನ್ಜಿಎಂಎ)ನಲ್ಲಿ ಶನಿವಾರ ಏರ್ಪಡಿಸಿದ್ದ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈನ ಕೊಲಾಬಾದಲ್ಲಿ ನನ್ನ ಮೊದಲ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದ್ದೆ. ಆ ಸಂದರ್ಭದಲ್ಲಿ ಭೇಟಿ ನೀಡಿದ ಹೆಬ್ಬಾರ್ ಅವರು, ಚಿತ್ರದಲ್ಲಿ ಮೂಡಿಸಲಾದ ರೇಖೆಗಳನ್ನು ಮೆಚ್ಚಿ `ಎಕ್ಸಲೆಂಟ್~ ಎಂದು ಶ್ಲಾಘಿಸಿದರು ಎಂದು ಸ್ಮರಿಸಿದರು.
`ಹೆಬ್ಬಾರ್ ಬರೀ ಚಿತ್ರಕಲಾವಿದರಷ್ಟೇ ಆಗಿರಲಿಲ್ಲ. ಸಾಹಿತ್ಯದ ಬಗ್ಗೆಯೂ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಅವರು ಡಾ.ಶಿವರಾಮ ಕಾರಂತ, ಡಾ.ದ.ರಾ.ಬೇಂದ್ರೆ ಅವರ ಸಾಹಿತ್ಯವನ್ನೂ ಅಧ್ಯಯನ ಮಾಡಿದ್ದರು~ ಎಂದರು.
ಚಿತ್ರಕಲಾವಿದೆ ಎನ್. ಪುಷ್ಪಮಾಲಾ ಮಾತನಾಡಿ, `ರಂಗಭೂಮಿ ಚಳವಳಿ ಮತ್ತು ಸಿನಿಮಾದಲ್ಲಿ ಹೊಸ ಅಲೆಯ ಚಿತ್ರಗಳು ಬರುವ ಹೊತ್ತಿಗೆ ಹೆಬ್ಬಾರರು ತಮ್ಮ ಕಲಾಕೃತಿಗಳ ರಚನೆಯಲ್ಲಿ ತೊಡಗಿದ್ದರು.
ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತ ಮತ್ತು ಗಿರೀಶ ಕಾರ್ನಾಡ ಅವರೊಂದಿಗೆ ತಮ್ಮ ಚಿತ್ರಗಳ ರಚನೆಯ ಕುರಿತು ನಿಕಟ ಸಂಪರ್ಕ ಹೊಂದಿದ್ದರು~ ಎಂದರು.
ಕಲಾವಿದೆ ರಜನಿ ಪ್ರಸನ್ನ, `ಹೆಬ್ಬಾರರು, ಚಿತ್ರ ರಚನೆಯ ಜೊತೆಗೆ ಹಲವು ರಾಗಗಳನ್ನೂ ಅಭ್ಯಾಸ ಮಾಡಿದ್ದರು. ಹಲವು ಬಾರಿ ತನ್ಮಯರಾಗಿ ಹಾಡುತ್ತಿದ್ದರು. ಯಾವ ರಾಗ ಎಂದು ಪ್ರಶ್ನಿಸಿದರೆ, ಯಾವ ರಾಗವೋ ಏನೋ. ಆದರೆ ಅದ್ಭುತವಾಗಿದೆ ಎಂದು ಖುಷಿಯಿಂದ ಹಾಡುತ್ತಿದ್ದರು~ ಎಂದು ಸ್ಮರಿಸಿದರು.