ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ಗೆ ಪ್ರೊ. ಸುಮಿತ್ರಾ ಬಾಯಿ ಹಾಗೂ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿರುವ ಆದೇಶದ ರದ್ದತಿಗೆ ಕೋರಿರುವ ಅರ್ಜಿದಾರರು ಹೈಕೋರ್ಟ್ನಿಂದ ಬುಧವಾರ ಪರೀಕ್ಷೆಗೆ ಒಳಗಾದರು.
ಇವರಿಬ್ಬರು ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿ ಕೆ.ಪ್ರಸನ್ನ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಿದ್ದಾರೆ. ಅರ್ಜಿಯಲ್ಲಿನ ಕೆಲವೊಂದು ಅಂಶಗಳನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಹಾಜರು ಇದ್ದ ಪ್ರಸನ್ನ ಅವರನ್ನು ಕರೆಸಿತು.
`ನಿಮ್ಮ ಉದ್ಯೋಗವೇನು~ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅದಕ್ಕೆ ಪ್ರಸನ್ನ ಅವರು, `ನಾನು ಆಟೋ ಚಾಲಕ~ ಎಂದರು. `ಆಟೋ ಚಾಲಕನಿಗೂ, ಮೈಸೂರು ವಿವಿಗೂ ಏನು ಸಂಬಂಧ, ಈ ಅರ್ಜಿ ಸಲ್ಲಿಸಿರುವ ಉದ್ದೇಶವೇನು, ಈ ಅರ್ಜಿ ಸಲ್ಲಿಕೆಯ ಹಿಂದೆ ಯಾರಿದ್ದಾರೆ~ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರಸನ್ನ ಅವರು, `ಯಾರೂ ಇಲ್ಲ. ನಾನೊಬ್ಬ ಸಾಮಾಜಿಕ ಕಾರ್ಯಕರ್ತ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನನಗೆ ಕಾಳಜಿ ಇದೆ~ ಎಂದರು.
ನ್ಯಾಯಮೂರ್ತಿಗಳು ಪರಸ್ಪರ ಚರ್ಚಿಸಿಕೊಂಡ ನಂತರ ವಿಚಾರಣೆಯನ್ನು ಮುಂದೂಡಿದರು. ಪ್ರತಿಯೊಂದು ವಿಚಾರಣೆ ವೇಳೆಗೂ ಅರ್ಜಿದಾರರು ಕಡ್ಡಾಯವಾಗಿ ಹಾಜರು ಇರಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
`ಈ ಇಬ್ಬರು ಹಿಂದೆ ಬೇರೆ ಹುದ್ದೆಯಲ್ಲಿದ್ದಾಗ ಹಣಕಾಸಿನ ವಿಚಾರವಾಗಿ ಲಕ್ಷಾಂತರ ರೂಪಾಯಿ ಅವ್ಯವಹಾರ ಎಸಗಿದ್ದಾರೆ. ಇಂಥವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಲಾಗಿದೆ~ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
`ಜಾಗ ತೆರವುಗೊಳಿಸಿ, ಶುಚಿಗೊಳಿಸಿ~
ಇಂದಿರಾನಗರದ ಎಚ್ಎಎಲ್ 2ನೇ ಹಂತದ ಅಪ್ಪರೆಡ್ಡಿಪಾಳ್ಯ ಬಳಿ ನಾಗರಿಕ ಸೌಲಭ್ಯಕ್ಕೆ ಮೀಸಲು ಇರಿಸಿರುವ ಜಾಗವನ್ನು ತೆರವುಗೊಳಿಸಿ ಹಿಂದಿನ ಸ್ಥಿತಿಗೆ ತರುವಂತೆ ಹೈಕೋರ್ಟ್ ಸರ್ಕಾರಕ್ಕೆ ಬುಧವಾರ ಆದೇಶಿಸಿದೆ.
ಇಲ್ಲಿಯ ಜಮೀನನ್ನು 30 ವರ್ಷಗಳ ಗುತ್ತಿಗೆಗೆ ಇಂದಿರಾನಗರ ಸಾಮಾಜಿಕ ಕ್ಷೇಮಾಭಿವೃದ್ಧಿ ಟ್ರಸ್ಟ್ಗೆ ನೀಡಿರುವ ಕ್ರಮ ಪ್ರಶ್ನಿಸಿ `ಇಂದಿರಾನಗರ ಕ್ಷೇಮಾಭಿವೃದ್ಧಿ ಸಂಘ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.
ಕೋರ್ಟ್ ಈ ಹಿಂದೆ ನೀಡಿದ್ದ ಆದೇಶದ ಹೊರತಾಗಿಯೂ ಅದನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ ಎನ್ನುವುದು ಅವರ ದೂರು. ಈ ಹಿನ್ನೆಲೆಯಲ್ಲಿ ತಮ್ಮ ಆದೇಶ ಪಾಲನೆ ಆದ ಕುರಿತು ವಸ್ತುಸ್ಥಿತಿ ವಿವರಿಸುವಂತೆ ಪೀಠ ಅಧಿಕಾರಿಗಳಿಗೆ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.