ಬೆಂಗಳೂರು: ‘ಕಂಬಾರರದ್ದು ಸಿದ್ಧಮಾದರಿಗೆ ದಕ್ಕುವ ಸಾಹಿತ್ಯವಲ್ಲ. ವೈಯಕ್ತಿಕ ಅಂತರಂಗದ ಅನಾವರಣವೇ ಅವರ ಸಾಹಿತ್ಯದ ಪ್ರಮುಖ ಉದ್ದೇಶ’ ಎಂದು ವಿಮರ್ಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಜಗದ್ಗುರು ರೇಣುಕಾಚಾರ್ಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ–ಒಂದು ಅವಲೋಕನ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಕಂಬಾರರ ನಾಟಕಗಳು ಹಳ್ಳಿ ಮತ್ತು ನಗರ ಸಂಘರ್ಷಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿರುವುದಲ್ಲದೇ, ವ್ಯಕ್ತಿ ಪ್ರಜ್ಞೆಯ ಜತೆಯಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಸಶಕ್ತವಾಗಿ ಬಿಂಬಿಸುತ್ತದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
‘ಮಾವೊತ್ಸೆ ಕುರಿತು ಬರೆದ ಕವಿತೆಯಲ್ಲಿ ಜನಪ್ರಿಯತೆಯನ್ನು ಹೊಗಳುತ್ತಲೇ ವ್ಯಂಗ್ಯವಾಡಿದ್ದಾರೆ. ಅವರ ಕಾವ್ಯ ಪ್ರಕಾರವು ವೈಭವ, ವ್ಯಂಗ್ಯ, ವಿಷಾದ ನಂತರ ಪ್ರತಿರೋಧದ ಮಾದರಿಯಲ್ಲಿ ಸಾಗುತ್ತದೆ. ಈ ಪ್ರಕಾರವು ಕನ್ನಡಕ್ಕೆ ಸಲ್ಲುವ ವಿಶೇಷ ಕಾಣಿಕೆ’ ಎಂದು ಬಣ್ಣಿಸಿದರು.
ಕಂಬಾರ ಕನ್ನಡದ ಬ್ರೆಕ್ಟ್: ‘ಕಂಬಾರ ಅವರನ್ನು ನಾಟಕಕಾರ ಬ್ರೆಕ್ಟ್ಗೆ ಹೋಲಿಸಬಹುದು. ಬ್ರೆಕ್ಟ್ ತಮ್ಮ ನಾಟಕಗಳಲ್ಲಿ ಬಂಡವಾಳಶಾಹಿ ನಿಲುವನ್ನು ವಿರೋಧಿಸಿದರೆ, ಕಂಬಾರ ಜಮೀನ್ದಾರಿ ಪದ್ದತಿಯನ್ನು ಪ್ರತಿರೋಧಿಸಿದರು. ಜಾಗತೀಕರಣದ ಭರಾಟೆಯಲ್ಲಿಯೂ ಈ ನೆಲದ ಸಂಸ್ಕೃತಿ ಅಳಿಯದಂತೆ ಅಕ್ಷರ ರೂಪ ನೀಡಿದ್ದಾರೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಕಾವ್ಯ, ಕಥನ, ನಾಟಕ, ಪ್ರಬಂಧ ಹೀಗೆ ಎಲ್ಲ ಪ್ರಕಾರಗಳಲ್ಲೂ ಉತ್ತಮ ಕೃಷಿ ನಡೆಯಬೇಕು. ಆಗ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗುತ್ತದೆ’ ಎಂದು ಹೇಳಿದರು.
‘ಕನ್ನಡದ ಅಸ್ತಿತ್ವಕ್ಕೆ ಆತಂಕ ಎದುರಾಗಿದ್ದು, ವಿಶ್ವವಿದ್ಯಾಲಯವು ಕನ್ನಡ ಉಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.