ಕೃಷ್ಣರಾಜಪುರ: `ಮಹಿಳೆಯರ ಹಕ್ಕು ರಕ್ಷಣೆಗೆ ಒತ್ತಾಯಿಸಿ ಮತ್ತು ದೌರ್ಜನ್ಯಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನವಾದಿ ಮಹಿಳಾ ಸಂಘಟನೆ ಹೋರಾಟ ನಡೆಸುತ್ತಿದೆ' ಎಂದು ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಹೇಳಿದರು.
ಕೃಷ್ಣರಾಜಪುರದಲ್ಲಿ ಭಾನುವಾರ ಏರ್ಪಡಿಸಿದ್ದ ಜನವಾದಿ ಮಹಿಳಾ ಸಂಘಟನೆಯ 6ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. `ಸಂವಿಧಾನದ ಹಕ್ಕು ಎಲ್ಲರಿಗೂ ಸಿಗಬೇಕು. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಶೋಷಣೆಗೊಳಗಾದ ಮಹಿಳೆಯರನ್ನು ಸಮಾಜಮುಖಿಯನ್ನಾಗಿಸುವುದು ಸಂಘಟನೆಯ ಉದ್ದೇಶ' ಎಂದು ಅವರು ತಿಳಿಸಿದರು.
`ಸಂಘಟಿತ ಹೋರಾಟದಿಂದ ಮಾತ್ರ ಫಲ ಸಾಧ್ಯ. ಕಾರ್ಯಕರ್ತೆಯರು ಅಲ್ಲಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅತ್ಯಾಚಾರ, ವರದಕ್ಷಿಣೆ ಪಿಡುಗನ್ನು ಪರಿಣಾಮಕಾರಿಯಾಗಿ ಎದುರಿಸಲು ಶಕ್ತರಾಗಬೇಕು' ಎಂದು ಅವರು ಕರೆ ನೀಡಿದರು.
ರಾಜ್ಯ ಘಟಕದ ಅಧ್ಯಕ್ಷೆ ಗೌರಮ್ಮ ಮಾತನಾಡಿ, `ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ, ಯೋಜನೆಗಳ ಅನುಷ್ಠಾನ ಗೊಂದಲ ಗೂಡಾಗಿದೆ. ಹೀಗಾಗಿ ಕೆಳಸ್ತರದ ಮಹಿಳೆಯರಿಗೆ ಹಕ್ಕು ಒದಗಿಸುವುದು ಸಂಘಟನೆಯ ಉದ್ದೇಶ' ಎಂದರು. ಮೌಂಟ್ ಕಾರ್ವೆುಲ್ ಕಾಲೇಜಿನ ಪ್ರಾಂಶುಪಾಲರಾದ ಎಸ್ತರ್, ಸಾಮಾಜಿಕ ಕಾರ್ಯಕರ್ತೆ ಟಿ.ಡಿ.ಬಾನು ಉಪಸ್ಥಿತರಿದ್ದರು.