ಬೆಂಗಳೂರು: ಜಾತಿಗೊಂದು ಸ್ಮಶಾನ ನಿರ್ಮಿಸದೆ ಒಂದೇ ಕಡೆ ಶವ ಸಂಸ್ಕಾರ ಮಾಡುವ ವ್ಯವಸ್ಥೆ ತರಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ವಿವಿಧ ಸಮುದಾಯಗಳಿಗೆ ರುದ್ರಭೂಮಿಗಾಗಿ ಸರ್ಕಾರಿ ಜಾಗ ಮಂಜೂರು ಮಾಡುವ ಕುರಿತು ಕಾಂಗ್ರೆಸ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಅವರ ಪ್ರಶ್ನೆಯ ಮೇಲೆ ಚರ್ಚೆ ನಡೆಯಿತು.
‘ಜಾತಿಗೆ ಒಂದು, ಉಪಜಾತಿಗೆ ಒಂದು ಸ್ಮಶಾನ ಮಾಡಬಾರದು. ಎಲ್ಲರಿಗೂ ಒಂದೇ ಸ್ಮಶಾನ ಇರಬೇಕು’ ಎಂದು ರಾಮಚಂದ್ರಗೌಡ ಹೇಳಿದರೆ, ‘ಜಾತಿ ಮೀರಿದಂತಹ ಸ್ಮಶಾನಗಳು ಇರಬೇಕು. ಈ ಬಗ್ಗೆ ಸರ್ಕಾರ ನೀತಿ ರೂಪಿಸಬೇಕು’ ಎಂದು ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು. ಈ ಕುರಿತು ನಡೆದ ಚರ್ಚೆಯಲ್ಲಿ ಬಸವನಗೌಡ ಪಾಟೀಲ ಯತ್ನಾಳ, ಎಂ.ಕೆ. ಪ್ರಾಣೇಶ್ ಪಾಲ್ಗೊಂಡಿದ್ದರು.