ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರಿಗೆ ಶೀಘ್ರದಲ್ಲೇ ಭದ್ರತೆ ಒದಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು.
ಅಬ್ರಹಾಂ ಅವರಿಗೆ ಭದ್ರತೆ ನೀಡಲು ಸಾಧ್ಯವಾಗದಿರುವುದಕ್ಕೆ ಕಾರಣ ಸಿಬ್ಬಂದಿ ಕೊರತೆ ಅಲ್ಲ ಎಂದು ಮಿರ್ಜಿ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಧೀಶ ಎನ್.ಕೆ. ಸುಧೀಂದ್ರ ರಾವ್ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು.
`ಭದ್ರತೆ ಕೋರಿ ಅಬ್ರಹಾಂ ಅವರು ಇದೇ 14ರಂದು ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೂ, ಏಕೆ ಭದ್ರತೆ ಒದಗಿಸಿಲ್ಲ' ಎಂಬ ಪ್ರಶ್ನೆಗೆ, `ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನನಗೆ ದೊರೆತಿಲ್ಲ' ಎಂದು ಉತ್ತರಿಸಿದರು. `ನನಗೆ ಜೀವ ಬೆದರಿಕೆ ಇರುವ ಕಾರಣ, ಪೊಲೀಸ್ ಭದ್ರತೆ ಬೇಕು. ನನ್ನ ಕೋರಿಕೆಗೆ ಪೊಲೀಸರು ಸ್ಪಂದಿಸಿಲ್ಲ. ಆದ್ದರಿಂದೆ ನಿರ್ದೇಶನ ನೀಡಬೇಕು' ಎಂದು ಅಬ್ರಹಾಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.