ಬೆಂಗಳೂರು: ‘ನನ್ನ ನಾಲ್ಕೂವರೆ ವರ್ಷದ ಸುಸ್ಥಿರ ಆಡಳಿತಕ್ಕೆ ಅಂದಿನ ಪ್ರಾಮಾಣಿಕ ಅಧಿಕಾರಿಗಳು ಕಾರಣರು. ಅವರಲ್ಲಿ ಎಂ.ಕೆ.ಶಂಕರಲಿಂಗೇಗೌಡ ಅವರು ಪ್ರಮುಖರು’ ಎಂದು ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಹೇಳಿದರು.
ಎಂ.ಕೆ. ಶಂಕರಲಿಂಗೇಗೌಡ ಅಭಿನಂದನಾ ಸಮಿತಿಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಶಂಕರ ಲಿಂಗೇಗೌಡ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದಕ್ಷ, ನಿಷ್ಪಕ್ಷಪಾತ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಶಂಕರಲಿಂಗೇಗೌಡ ಅವರು ಯಾವುದೇ ಹುದ್ದೆಯಲ್ಲಿರಲಿ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಸಂವೇದನಾಶೀಲರಾಗಿ ಆಲಿಸಿ, ಪರಿಹರಿಸುವ ಕಾರ್ಯವನ್ನು ಮಾಡಿದ್ದಾರೆ’ ಎಂದರು.
‘ಬೆಂಗಳೂರು–ಮೈಸೂರು ಹೆದ್ದಾರಿ ಯೋಜನೆಯು ನನ್ನ ಕನಸಿನ ಕೂಸಾಗಿತ್ತು. ಅದನ್ನು ಸಾಕಾರರೂಪದಲ್ಲಿ ತಂದವರು ಶಂಕರಲಿಂಗೇಗೌಡ ಹಾಗೂ ಕಂಬಳಿ ಎಂಬ ಪ್ರಾಮಾಣಿಕ ಅಧಿಕಾರಿಗಳು. ಆ ರಸ್ತೆಯಲ್ಲಿ ನಾನು ಸಂಚರಿಸುವಾಗ ಇಂದಿಗೂ ಅವರನ್ನು ನೆನಪಿಸಿ ಕೊಳ್ಳುತ್ತೇನೆ’ ಎಂದು ಹೇಳಿದರು.
‘ವಿಕಾಸ ಸೌಧದ ಪರಿಕಲ್ಪನೆ ಬಂದು ಅದು ಸಾಕಾರ ರೂಪು ಹೊಂದಲು, ಮತ್ತು ಅದರ ಹೆಸರು ವಿಕಾಸ ಸೌಧ ಎಂದು ಇಡಿ ಎಂದು ಸೂಚಿಸಿದವರು ಶಂಕರಲಿಂಗೇಗೌಡ ಅವರು ’ ಎಂದರು.
ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಮಾತನಾಡಿ, ‘ಗಾಂಧಿಭವನವನ್ನು ಸುಂದರಗೊಳಿಸಿ, ಅದಕ್ಕೆ ಒಂದು ಸ್ಥಾನವನ್ನು ಕಲ್ಪಿಸಿದವರು ಶಂಕರಲಿಂಗೇಗೌಡ ಅವರು. ಅವರು ತಮ್ಮ ಕೆಲಸವನ್ನು ಸೇವೆಯೆಂದೇ ಪರಿಗಣಿಸಿ ಮಾಡಿದವರು’ ಎಂದರು. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಮಾತನಾಡಿದರು.