ಬೆಂಗಳೂರು: ‘ನೇಪಥ್ಯ ಕಲಾವಿದರಿಂದಲೇ ರಂಗಭೂಮಿಗೆ ಕಳೆ ಬಂದಿದೆ. ಆದರೆ, ಅವರನ್ನು ಗುರುತಿಸುವ ಕೆಲಸವಾಗುತ್ತಿಲ್ಲ’ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸದಸ್ಯ ಜಯರಾಮರಾಜೇ ಅರಸ್ ವಿಷಾದ ವ್ಯಕ್ತಪಡಿಸಿದರು.
ಲಲಿತಕಲಾ ಅಕಾಡೆಮಿಯು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೂರು ದಿನಗಳ ‘ನೇಪಥ್ಯ ಕಲಾಕಮ್ಮಟ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯಕ್ಷಗಾನ, ನಾಟಕಗಳಿಗೆ ಮೌಲ್ಯವರ್ಧನೆ ನೀಡುವ ನೇಪಥ್ಯ ಕಲೆಯನ್ನು ದೃಶ್ಯ ಕಲೆಯೊಂದಿಗೆ ಸೇರಿಸಿ ಹೊಸ ಆಯಾಮ ನೀಡಬೇಕು’ ಎಂದರು.
ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ. ದಯಾನಂದ ಮಾತನಾಡಿ, ‘ಮೋಹಿನಿಯಾಟ್ಟಂ ಸೇರಿದಂತೆ ಜನಪದ ಕಲೆಗಳನ್ನು ನೇಪಥ್ಯ ಕಲಾವಿದರು ಜೀವಂತವಾಗಿಟ್ಟಿದ್ದಾರೆ. ರಂಗಭೂಮಿಗೆ ಹೊಸ ಸ್ಪರ್ಶ ನೀಡುವ ನೇಪಥ್ಯ ಕಲಾವಿದರು, ತೆರೆಮರೆಯಲ್ಲೇ ಉಳಿದಿರುವುದು ಬೇಸರ ಸಂಗತಿ’ ಎಂದರು.
ಅಕಾಡೆಮಿ ಅಧ್ಯಕ್ಷ ಎಂ.ಎಸ್.ಮೂರ್ತಿ ಮಾತನಾಡಿ, ‘ಅಳಿವಿನಂಚಿನಲ್ಲಿ ಇರುವ ಕಲೆಗಳನ್ನು ಉಳಿಸಬೇಕಿದೆ. ನೇಪಥ್ಯ ಕಲೆಗೆ ಅಧಿಕೃತ ಸ್ಥಾನ ಸಿಗಬೇಕಿದೆ’ ಎಂದರು.