ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ (ಪಿಐಎಲ್) ವೈಯಕ್ತಿಕ ಹಿತಾಸಕ್ತಿಗಳು ಇರಬಾರದು ಎಂದು ಅರ್ಜಿದಾರರಿಗೆ ಕಿವಿಮಾತು ಹೇಳಿರುವ ಹೈಕೋರ್ಟ್, ಪಿಐಎಲ್ಗಳನ್ನು ಸೂಕ್ತ ಪ್ರಕರಣಗಳಲ್ಲಿ ಮಾತ್ರ ಬಳಸಿಕೊಳ್ಳಬೇಕು ಎಂದು ಹೇಳಿದೆ.
ನಗರದ ಎಚ್ಆರ್ಬಿಆರ್ ಬಡಾವಣೆಯ ಸುಜಾತಾ ರಾಜಶೇಖರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಾತು ಹೇಳಿತು.
ತಮ್ಮ ಬಡಾವಣೆಯಲ್ಲಿ ಸ್ಥಾಪನೆಯಾಗಿರುವ ಒಂದು ಮಾಂಸಾಹಾರಿ ಹೋಟೆಲ್ನಿಂದ ತೊಂದರೆ ಆಗುತ್ತಿದೆ ಎಂದು ದೂರಿ ಅವರು ಅರ್ಜಿ ಸಲ್ಲಿಸಿದ್ದರು.
ಹೋಟೆಲ್ನಿಂದ ಕೆಟ್ಟ ವಾಸನೆ ಬರುತ್ತಿದೆ. ಇದರಿಂದ ಆ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ಆಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
`ತೊಂದರೆ ಆಗುತ್ತಿರುವುದು ಯಾರಿಗೆ? ನಿಮಗೊಬ್ಬರಿಗೆ ಮಾತ್ರ ತೊಂದರೆ ಆಗುತ್ತಿದ್ದರೆ, ಇಂಥ ವಿಚಾರಗಳ ಬಗ್ಗೆ ಪಿಐಎಲ್ ಹಾಕಬೇಡಿ' ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.