ಹೊಸಕೋಟೆ: ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಇತರೆ ಮೂವರು ಗಾಯಗೊಂಡಿದ್ದಾರೆ.
ಕೋಲಾರ ರಸ್ತೆಯ ಗಂಗಾಪುರ ಗ್ರಾಮದ ಬಳಿ ಲಾರಿ ಹಾಗೂ ಕಾರೊಂದರ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನ ಚಾಲಕ ಬೆಂಗಳೂರು ಆರ್.ಟಿ.ನಗರದ ಆರ್.ರಾಜು (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಲ್ಡಿಂಗ್ ಕಂಟ್ರಾಕ್ಟರ್ ಆದ ರಾಜು ತಿರುಪತಿಯಲ್ಲಿ ಬುಧವಾರ ನಡೆದ ಮಗಳ ವಿವಾಹ ಸಮಾರಂಭ ಮುಗಿಸಿಕೊಂಡು ಹಿಂದಿರುಗುತ್ತಿದಾಗ ಈ ಅವಘಡ ಸಂಭವಿಸಿದೆ.
ಮತ್ತೊಂದು ಪ್ರಕರಣದಲ್ಲಿ ಚಿಂತಾ-ಮಣಿ ರಸ್ತೆಯ ಕರಪನಹಳ್ಳಿ ಸಮೀಪ ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಬೆಂಗಳೂರು ಬಿಟಿಎಂ ಬಡಾವಣೆಯ ಎಸ್.ಬಾಬು (40) ಸ್ಥಳದಲ್ಲೇ ಮೃತಪಟ್ಟಿದಾರೆ. ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಬ್ಬರೂ ಕೈವಾರದಲ್ಲಿದ್ದ ವಿವಾಹ ಸಮಾರಂಭಕ್ಕೆ ಹೋಗುತ್ತಿದಾಗ ಈ ಅವಘಡ ನಡೆದಿದೆ.