ಬೆಂಗಳೂರು: `ವಾಹನಗಳಲ್ಲಿನ ಬಣ್ಣದ ಗಾಜನ್ನು (ಟಿಂಟ್) ತೆಗೆಸದ ಮಾಲೀಕರ ವಿರುದ್ಧ ಮಂಗಳವಾರದಿಂದ (ಜೂ.5) ದೂರು ದಾಖಲಿಸಿ ದಂಡ ವಿಧಿಸಲಾಗುತ್ತದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ವಾಹನಗಳ ಬಣ್ಣದ ಗಾಜನ್ನು ತೆಗೆಸಲು ಈ ಮೊದಲು ಮೇ 19ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ವಾಹನ ಮಾಲೀಕರ ಮನವಿ ಮೇರೆಗೆ ಗಡುವನ್ನು ಜೂ.5ರವರೆಗೆ ವಿಸ್ತರಿಸಲಾಯಿತು. ಇದೀಗ ಗಡುವಿನ ಅವಧಿ ಕೊನೆಗೊಂಡಿದ್ದು, ಈ ನಿಯಮ ಉಲ್ಲಂಘಿಸುವ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ~ ಎಂದರು.
ಬಣ್ಣದ ಗಾಜು ತೆಗೆಸಲು ನೀಡಿದ್ದ ಗಡುವನ್ನು ಪುನಃ ವಿಸ್ತರಿಸುವುದಿಲ್ಲ. ಮಂಗಳವಾರ ಬೆಳಿಗ್ಗೆಯಿಂದಲೇ ನಗರದ ಬಹುತೇಕ ಸಿಗ್ನಲ್ಗಳು, ವೃತ್ತಗಳು ಹಾಗೂ ಜಂಕ್ಷನ್ಗಳಲ್ಲಿ ಸಿಬ್ಬಂದಿ ವಾಹನಗಳ ಗಾಜನ್ನು ಪರಿಶೀಲಿಸಲಿದ್ದಾರೆ. ಬಣ್ಣದ ಗಾಜು ತೆಗೆಸದ ವಾಹನ ಪ್ರತಿ ಬಾರಿ ಸಿಕ್ಕಿ ಬಿದ್ದಾಗಲೂ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಮೊದಲ ಬಾರಿ ನಿಯಮ ಉಲ್ಲಂಘಿಸಿ ಸಿಕ್ಕಿ ಬೀಳುವ ವಾಹನ ಮಾಲೀಕರಿಗೆ ನೂರು ರೂಪಾಯಿ ದಂಡ ವಿಧಿಸಲಾಗುತ್ತದೆ. ಅದೇ ವಾಹನದ ಮಾಲೀಕ ಎರಡನೇ ಬಾರಿ ನಿಯಮ ಉಲ್ಲಂಘಿಸಿ ಸಿಕ್ಕಿ ಬಿದ್ದರೆ 300 ರೂ ದಂಡ ಹಾಗೂ ಮೂರನೇ ಬಾರಿಯೂ ನಿಯಮ ಉಲ್ಲಂಘನೆ ಮಾಡಿದರೆ 300 ರೂಪಾಯಿ ದಂಡದ ಜತೆಗೆ ಆತನ ಚಾಲನಾ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ. ಈ ನಿಯಮ ಉಲ್ಲಂಘಿಸುವವರಿಗೆ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಿರ್ಜಿ ಮಾಹಿತಿ ನೀಡಿದರು.