ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಿಬ್ಬಂದಿಯು ಶುಕ್ರವಾರ ಕೆಲಸದ ಅವಧಿ ಮುಗಿದ ನಂತರವೂ ಕಚೇರಿಯಲ್ಲಿ ರಾತ್ರಿವರೆಗೆ ಕಾರ್ಯ ನಿರ್ವಹಿಸಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಡಿಎ ಪ್ರಧಾನ ಕಚೇರಿಯಲ್ಲಿ ನೌಕರರು ರಾತ್ರಿಯೂ ಕೆಲಸ ಮಾಡುತ್ತಿದ್ದ ಸಂಗತಿ ತಿಳಿದು ಛಾಯಾಚಿತ್ರ ತೆಗೆಯಲು ಸ್ಥಳಕ್ಕೆ ಹೋದ ‘ಪ್ರಜಾವಾಣಿ’ ಛಾಯಾಗ್ರಾಹಕರೊಂದಿಗೆ ಅಲ್ಲಿನ ಪೊಲೀಸ್ ಸಿಬ್ಬಂದಿ ತಿಮ್ಮಾರೆಡ್ಡಿ ಎಂಬುವರು ವಾಗ್ವಾದ ನಡೆಸಿ, ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ.
ಅಲ್ಲದೇ, ಛಾಯಾಗ್ರಾಹಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಸಹೋದ್ಯೋಗಿಯೊಂದಿಗೆ ಸೇರಿ ಛಾಯಾಗ್ರಾಹಕರನ್ನು ಕೊಠಡಿಗೆ ಕರೆದೊಯ್ದು ತಪಾಸಣೆ ನೆಪದಲ್ಲಿ ಬಟ್ಟೆ ಬಿಚ್ಚಿಸಲು ಯತ್ನಿಸಿದ್ದಾರೆ.
ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ ನಂತರ ತಿಮ್ಮಾರೆಡ್ಡಿ ಮತ್ತು ಸಿಬ್ಬಂದಿ, ಛಾಯಾಗ್ರಾಹಕರನ್ನು ಕಚೇರಿಯಿಂದ ಬಿಟ್ಟು ಕಳುಹಿಸಿದ್ದಾರೆ.
ಬಿಡಿಎ ಸಿಬ್ಬಂದಿ ಮಂಗಳವಾರ (ಜ.27) ಕೂಡ ಕಚೇರಿಯ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಹಾಕಿಕೊಂಡು ಕಾರ್ಯ ನಿರ್ವಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ ಹಾಗೂ ಪ್ರಾಧಿಕಾರದಲ್ಲಿ ನಡೆದಿವೆ ಎನ್ನಲಾದ ಹಗರಣಗಳಿಗೆ ಸಂಬಂಧಿಸಿದ ಕಡತಗಳು ಬಿಡಿಎ ಪ್ರಧಾನ ಕಚೇರಿಯಲ್ಲಿದ್ದು, ಸಿಬ್ಬಂದಿ ಅವುಗಳನ್ನು ತಿದ್ದಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.