ಬೆಂಗಳೂರು: ಆಟೊ ಚಾಲಕನೊಬ್ಬ ಮಧುಮಿತಾ ಎಂಬ ಸಾಫ್ಟ್ವೇರ್ ಎಂಜಿನಿಯರ್ ಕೆನ್ನೆಗೆ ಹೊಡೆದು ಚಿನ್ನಾಭರಣ ದೋಚಿರುವ ಘಟನೆ ಮೈಕೊಲೇಔಟ್ ಸಮೀಪದ ವಿಜಯಾ ಬ್ಯಾಂಕ್ ಲೇಔಟ್ನಲ್ಲಿ ಮಂಗಳವಾರ ನಡೆದಿದೆ.
ದೇವರಚಿಕ್ಕನಹಳ್ಳಿ ನಿವಾಸಿಯಾದ ಮಧುಮಿತಾ ಅವರು ಜೆ.ಪಿ.ನಗರ ಮೂರನೇ ಹಂತದ ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಅವರು ಸಂಜೆ 5.30ರ ಸುಮಾರಿಗೆ ಮನೆಗೆ ಹೋಗಲು ಕಂಪೆನಿ ಬಳಿ ಆಟೊಗೆ ಹತ್ತಿದ್ದರು. ಅವರನ್ನು ಸ್ವಲ್ಪ ದೂರ ಕರೆದೊಯ್ದ ಚಾಲಕ ಮಾರ್ಗಮಧ್ಯೆ ಅಪರಿಚಿತ ವ್ಯಕ್ತಿಯನ್ನು ವಾಹನಕ್ಕೆ ಹತ್ತಿಸಿಕೊಂಡಿದ್ದ. ಬಳಿಕ ಆತ ಆ ವ್ಯಕ್ತಿಯ ಜತೆ ಸೇರಿ ಮಧುಮಿತಾ ಅವರ ಕೆನ್ನೆಗೆ ಹೊಡೆದು 35 ಗ್ರಾಂ ಚಿನ್ನಾಭರಣ, ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆರೋಪಿಗಳು ಹುಳಿಮಾವು ಬಳಿಯ ದೊಡ್ಡಕಮ್ಮನಹಳ್ಳಿಯಲ್ಲಿ ಮಧುಮಿತಾ ಅವರನ್ನು ವಾಹನದಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ. ಮಧುಮಿತಾ, ತಮಿಳುನಾಡು ಮೂಲದವರು. ಆರೋಪಿಗಳು ಹಾಗೂ ಅವರ ಆಟೊ ನೋಂದಣಿ ಸಂಖ್ಯೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.