ಬೆಂಗಳೂರು: ರಾಜ್ಯ ಹೈಕೋರ್ಟ್ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ರಚನೆಯಾಗಿದ್ದ ಇಬ್ಬರು ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠವು ಇತ್ತೀಚೆಗೆ ಮೊದಲ ಆದೇಶ ಪ್ರಕಟಿಸಿದೆ.
‘ಮಹಿಳೆಯೊಬ್ಬರನ್ನು ಪತಿ ಹಣಕ್ಕಾಗಿ ಪೀಡಿಸಿ ಕೊಲೆ ಮಾಡಿದ’ ಆರೋಪದ ಪ್ರಕರಣದಲ್ಲಿ ಪತಿಯನ್ನು ದೋಷಮುಕ್ತ ಎಂದು ನ್ಯಾಯಪೀಠ ಆದೇಶಿಸಿದೆ.
‘ಪತ್ನಿಗೆ ಕಿರುಕುಳ ನೀಡಿದ್ದೇನೆ ಮತ್ತು ಆಕೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದೇನೆ ಎಂಬ ಆರೋಪದ ಮೇಲೆ ವಿಚಾರಣಾ ನ್ಯಾಯಾಲಯ ನನಗೆ 2009ರಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿದೆ. ನಾನು ನಿರಪರಾಧಿ. ಆದ್ದರಿಂದ ಈ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ಮೈಸೂರಿನ ಚಿಕ್ಕಣ್ಣ ಶೆಟ್ಟಿ ಎಂಬುವರು 2012ರಲ್ಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರತ್ನಕಲಾ ಮತ್ತು ನ್ಯಾಯಮೂರ್ತಿ ಕೊಟ್ರವ್ವ.ಎಸ್.ಮುದಗಲ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರಕರಣದಿಂದ ಚಿಕ್ಕಣ್ಣ ಶೆಟ್ಟಿಯನ್ನು ಖುಲಾಸೆಗೊಳಿಸಿ ಮತ್ತು ಆತನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಿ ಅ.11ರಂದು ಆದೇಶಿಸಿದೆ.
‘ಆರೋಪಕ್ಕೆ ಪೂರಕ ಸಾಕ್ಷ್ಯಾಧಾರ ಇಲ್ಲ. ಮೃತಳು ಸಾವಿಗೂ ಮುನ್ನ ನೀಡಿರುವ ಹೇಳಿಕೆಯಲ್ಲಿ ವಿಶ್ವಾಸಾರ್ಹತೆ ಕೊರತೆ ಇದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.