ಬೆಂಗಳೂರು: ಈ ಬಾರಿಯೂ ರಂಗಶಂಕರದಲ್ಲಿ ಭಾನುವಾರ ‘ಮಾವು ಉತ್ಸವ’ ಆಯೋಜಿಸಲಾಗಿತ್ತು. ಉತ್ಸವಕ್ಕೆ ಬಂದವರು ಬಗೆ ಬಗೆಯ ಮಾವಿನ ಹಣ್ಣುಗಳನ್ನು ತಿಂದು ಇತರರಿಗೂ ಹಂಚಿ ಖುಷಿ ಪಟ್ಟರು.
ಬಹುತೇಕರು ಬೇರೆ ಬೇರೆ ತಳಿಗಳ ಒಂದು ಕೆ.ಜಿ. ಮಾವಿನ ಹಣ್ಣುಗಳನ್ನು ತಂದಿದ್ದರು. ಅವುಗಳನ್ನು ನೀರು ತುಂಬಿಟ್ಟಿದ್ದ ಎರಡು ದೊಡ್ಡ ಪಾತ್ರೆಗಳಲ್ಲಿ ರಾಶಿ ಹಾಕಲಾಗಿತ್ತು. ಬಳಿಕ ನೆರೆದಿದ್ದವರು ತಮಗಿಷ್ಟವಾದ ಹಣ್ಣನ್ನು ಆಯ್ದುಕೊಂಡು ತಿನ್ನುತ್ತಾ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರ ಜೊತೆ ಹರಟೆ ಹೊಡೆದರು.
ಮಾವಿನಿಂದ ತಯಾರಿಸಿದ ವಿಶೇಷ ಖಾದ್ಯಗಳು ರಂಗಶಂಕರದ ಕ್ಯಾಂಟೀನ್ನಲ್ಲಿ ಸಿದ್ಧಗೊಂಡಿದ್ದವು.
ಜಯನಗರದ ನಿವಾಸಿ ಮುಕ್ತಾ, ‘ಐದು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇತರರೊಂದಿಗೆ ಸೇರಿ ಮಾವಿನ ಹಣ್ಣುಗಳನ್ನು ಹಂಚಿಕೊಂಡು ತಿನ್ನುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೆ. ಆ ಕ್ಷಣ ಈಗ ಈಡೇರಿದೆ’ ಎಂದರು.