ಬೆಂಗಳೂರು: ಉದ್ಯಮಿ ರಿಪ್ಪನ್ ಮಲ್ಹೋತ್ರಾ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು, ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ಅವರಿಗೆ ಮಂಗಳವಾರ ವರದಿ ಸಲ್ಲಿಸಿದ್ದಾರೆ.
‘ಹಿಂದಿನ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಹಾಗೂ ಸಿಸಿಬಿ ಡಿಸಿಪಿ ದೇವರಾಜ್ ಅವರು ಏಳು ಕೋಟಿ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ರಿಪ್ಪನ್ ಜೂ.29ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಇದೀಗ ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ‘ಅಧಿಕಾರಿಗಳು ಹಣ ನೀಡುವಂತೆ ಕಿರುಕುಳ ನೀಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ’ ಎಂದು ಹೇಳಿದ್ದಾರೆ.
‘ಪ್ರಕರಣ ಸಂಬಂಧ ರಿಪ್ಪನ್ ಸ್ನೇಹಿತರು, ಸಂಬಂಧಿಕರು, ಜ್ಯೋತಿ ಪ್ರಕಾಶ ಮಿರ್ಜಿ, ದೇವರಾಜ್ ಹಾಗೂ ಸಿಸಿಬಿಯ ಕೆಲ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ. ಅಲ್ಲದೇ, ರಿಪ್ಪನ್ ಮೊಬೈಲ್ಗೆ ಬಂದು ಹೋಗಿರುವ ಕರೆಗಳ ಬಗ್ಗೆ ಪರಿಶೀಲನೆ ನಡೆದಿದ್ದು, ಅಧಿಕಾರಿಗಳು ರಿಪ್ಪನ್ ಅವರಿಗೆ ಯಾವುದೇ ಕಿರುಕುಳ ನೀಡಿಲ್ಲ ಎಂಬುದು ಈವರೆಗಿನ ತನಿಖೆಯಿಂದ ಸಾಬೀತಾಗಿದೆ’ ಎಂದು ವರದಿಯಲ್ಲಿದೆ.
‘ರಿಪ್ಪನ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ 2 ದಿನಗಳ ಹಿಂದೆ (ಜೂ 27) ಪ್ರಕರಣವೊಂದರ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಬಂದು ಹೋಗಿದ್ದಾರೆ. ಆ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆದರೆ, ಅವರು ಈವರೆಗೆ ಮಿರ್ಜಿ ಅವರನ್ನಾಗಲೀ ಹಾಗೂ ದೇವರಾಜ್ ಅವರನ್ನಾಗಲೀ ಭೇಟಿಯಾಗಿರುವುದಕ್ಕೆ ಸಾಕ್ಷಿಗಳಿಲ್ಲ. ಈ ವರದಿಯನ್ನು ಡಿಜಿಪಿ ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.