ಬೆಂಗಳೂರು: ಇಲ್ಲಿನ ಕಂಟೋನ್ಮೆಂಟ್ ರೈಲು ನಿಲ್ದಾಣವೂ ಸೇರಿ ದೇಶದ 600 ಪ್ರಮುಖ ರೈಲು ನಿಲ್ದಾಣಗಳ ಮರುವಿನ್ಯಾಸ ಮಾಡಲು ಭಾರತೀಯ ರೈಲ್ವೆ ‘ಶ್ರೀಜನ್’ ಎಂಬ ಸ್ಪರ್ಧೆ ಆಯೋಜಿಸಿದೆ.
ಈ ಮೊದಲು ವಾಸ್ತುಶಿಲ್ಪಿಗಳನ್ನು ಕರೆಸಿ ಮೂರು ವಿನ್ಯಾಸಗಳನ್ನು ರೂಪಿಸಲಾಗುತ್ತಿತ್ತು. ಅದರಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.
ರೈಲ್ವೆ ಸೇವೆಯನ್ನು ಬಳಸುವ ಎಲ್ಲರನ್ನೂ ಒಳಗೊಳ್ಳಬೇಕು ಎನ್ನುವ ಉದ್ದೇಶದಿಂದ ಇಲಾಖೆ ಸ್ಪರ್ಧೆ ಹಮ್ಮಿಕೊಂಡಿದೆ. ಭಾರತೀಯ ರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮ (ಐಆರ್ಎಸ್ಡಿಸಿ) ಈ ಸ್ಪರ್ಧೆ ನಡೆಸುತ್ತದೆ.
ರೈಲು ಪ್ರಯಾಣಿಕರು, ನಗರ ಯೋಜನಾ ತಜ್ಞರು, ಎಂಜಿನಿಯರ್ಗಳು, ವಾಸ್ತುಶಿಲ್ಪಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮಾರ್ಚ್ 26ರೊಳಗೆ ತಮ್ಮ ಕಲ್ಪನೆಗಳನ್ನು ಇಲಾಖೆಗೆ ಕಳುಹಿಸಬೇಕು.
ವಿಜೇತರಿಗೆ ಪ್ರಮಾಣಪತ್ರ ನೀಡಲಾಗುತ್ತದೆ ಹಾಗೂ ಉತ್ತಮವಾದ ಕಲ್ಪನೆಯನ್ನು ವಿನ್ಯಾಸದೊಳಗೆ ಅಳವಡಿಸಿಕೊಳ್ಳಲಾಗುತ್ತದೆ.
ಇದರೊಂದಿಗೆ ಐಆರ್ಎಸ್ಡಿಸಿಗೆ ಲೋಗೊ ಮತ್ತು ಟ್ಯಾಗ್ಲೈನ್ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ವಿಜೇತರಾದವರಿಗೆ ₹75 ಸಾವಿರ ನಗದು ಬಹುಮಾನ ಇರಲಿದೆ.