ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿ40’ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಬಿಬಿಎಂಪಿ

ಹವಾಮಾನ ವೈಪರೀತ್ಯ, ಹಸಿರುಮನೆ ಪರಿಣಾಮ ತಡೆಗಟ್ಟುವ ಉದ್ದೇಶ
Last Updated 5 ಡಿಸೆಂಬರ್ 2017, 20:33 IST
ಅಕ್ಷರ ಗಾತ್ರ

ನವದೆಹಲಿ: ಹವಾಮಾನ ವೈಪರೀತ್ಯ ನಿರ್ವಹಿಸಲು ಹಾಗೂ ಹಸಿರುಮನೆ ಪರಿಣಾಮವನ್ನು ಕಡಿಮೆ ಮಾಡಲು ಶ್ರಮಿಸುತ್ತಿರುವ ‘ಸಿ40 ಸಿಟೀಸ್ ಕ್ಲೈಮೆಟ್‌ ಲೀಡರ್‌ಶಿಪ್‌ ಗ್ರೂಪ್‌’ನ ‘ಸಿ40 ವಾಯುಗುಣಮಟ್ಟ ಜಾಲ’ದ ನಾಯಕತ್ವದ ಒಪ್ಪಂದಕ್ಕೆ ಲಂಡನ್‌ ಮೇಯರ್ ಸಾದಿಕ್‌ ಖಾನ್‌ ಹಾಗೂ ಬೆಂಗಳೂರಿನ ಮೇಯರ್‌ ಆರ್‌.ಸಂಪತ್‌ ರಾಜ್‌ ಮಂಗಳವಾರ ಸಹಿ ಹಾಕಿದರು.

ಇಲ್ಲಿ ನಡೆದ ಸಭೆಯಲ್ಲಿ ಉಭಯ ನಾಯಕರು ಒಪ್ಪಂದ ಮಾಡಿಕೊಂಡರು.

ಈ ಜಾಲದಲ್ಲಿ ಜಗತ್ತಿನ 20 ಮಹಾನಗರಗಳು ಸದಸ್ಯತ್ವ ಹೊಂದಿವೆ. ಇದರಲ್ಲಿ ದೇಶದ ದೆಹಲಿ, ಮುಂಬೈ, ಚೆನ್ನೈ, ಜೈಪುರ, ಕೋಲ್ಕತ್ತ ನಗರಗಳು ಸೇರಿವೆ. ಈ ಜಾಲಕ್ಕೆ ಲಂಡನ್‌ ಮತ್ತು ಬೆಂಗಳೂರಿನ ಮೇಯರ್‌ ಮುಖ್ಯಸ್ಥರಾಗಿರುತ್ತಾರೆ. ಈ ನಗರಗಳು ತಾಪಮಾನ ಬದಲಾವಣೆ ಹಾಗೂ ವಾಯುಗುಣಮಟ್ಟ ಸುಧಾರಣೆಗೆ ಹೊಸ ಆಲೋಚನೆಗಳನ್ನು ಹಂಚಿಕೊಳ್ಳಲಿವೆ.

ಸದಸ್ಯತ್ವ ಪಡೆದಿರುವ ನಗರಗಳ ವಾಯು ಗುಣಮಟ್ಟ, ಸಾರಿಗೆ ವ್ಯವಸ್ಥೆ, ನಿರ್ಮಾಣ, ಇಂಧನ, ತ್ಯಾಜ್ಯ ನಿರ್ವಹಣೆಯ ಮಾಹಿತಿಯನ್ನು ಈ ಜಾಲವು ಪಡೆಯುತ್ತದೆ.

‘ಬೆಂಗಳೂರಿನ ಜನಸಂಖ್ಯೆ 1985ರಲ್ಲಿ 35 ಲಕ್ಷ ಇತ್ತು. ಈಗ 1.10 ಕೋಟಿಗೆ ಮುಟ್ಟಿದೆ. ತ್ವರಿತಗತಿಯ ಬೆಳವಣಿಗೆಯಿಂದಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ವಾಹನ ದಟ್ಟಣೆ, ನಿರ್ಮಾಣ ಕಾಮಗಾರಿ ಹೆಚ್ಚಾಗಿದ್ದು, ವಾಯು ಗುಣಮಟ್ಟ ಇಳಿಕೆಗೆ ಕಾರಣವಾಗಿದೆ’ ಎಂದು ಆರ್‌.ಸಂಪತ್‌ ರಾಜ್‌ ತಿಳಿಸಿದರು.

‘ಬಿಬಿಎಂಪಿಯು ಸಿ40 ಗ್ರೂಪ್‌ನೊಂದಿಗೆ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದೆ. ಲಂಡನ್‍ನೊಂದಿಗೆ ಸಿ40 ವಾಯುಗುಣಮಟ್ಟ ಜಾಲದ ಸಹ ನಾಯಕತ್ವ ವಹಿಸಲು ನಾವು ಉತ್ಸುಕವಾಗಿದ್ದೇವೆ. ವಿಶ್ವದ ವಿವಿಧ ನಗರಗಳ ಮೇಯರ್‌ಗಳನ್ನು ಒಟ್ಟಾಗಿಸಿ, ವಾಯುಮಾಲಿನ್ಯ ತಡೆಗೆ ಶ್ರಮಿಸುತ್ತೇವೆ’ ಎಂದರು.

ಸಾದಿಕ್ ಖಾನ್, ‘ಜಾಗತಿಕ ತಾಪಮಾನದಿಂದ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲ ಮಹಾನಗರಗಳು ಕೈಜೋಡಿಸಬೇಕು’ ಎಂದರು.

‘ಲಂಡನ್‌ನಲ್ಲಿ ಹೆಚ್ಚು ಮಾಲಿನ್ಯ ಉಂಟುಮಾಡುವ ಕಾರುಗಳಿಗೆ ವಿಷಾಂಶ ಶುಲ್ಕ ವಿಧಿಸಲು ಹಾಗೂ ವಿಷಯುಕ್ತ ಗಾಳಿಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಬಸ್‌ ಹಾಗೂ ಟ್ಯಾಕ್ಸಿಗಳನ್ನು ಮಾಲಿನ್ಯಮುಕ್ತಗೊಳಿಸಲು ಆಲ್ಟ್ರಾ ಲೋ ಎಮಿಷನ್‌ ಜೋನ್‌ ಪರಿಚಯಿಸುತ್ತಿದ್ದೇವೆ. ಅತ್ಯಾಧುನಿಕ ವಾಯು ಗುಣಮಟ್ಟ ಸಂವೇದಕ ಮೇಲ್ವಿಚಾರಣಾ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದು ವಿಷಾನಿಲದ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಿದೆ’ ಎಂದು ಹೇಳಿದರು.

ಮಾರ್ಚ್‌ನಲ್ಲಿ ಕಾರ್ಯಾಗಾರ

ಬೆಂಗಳೂರಿನಲ್ಲಿನ ವಾಯು ಮಾಲಿನ್ಯ ನಿಯಂತ್ರಿಸಲು ಕೈಗೊಳ್ಳಬಹುದಾದ ಮುಂಜಾಗೃತಾ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸುವ ಉದ್ದೇಶದಿಂದ 2018ರ ಮಾರ್ಚ್‌ನಲ್ಲಿ ಜಾಗತಿಕ ಮಟ್ಟದ ಕಾರ್ಯಾಗಾರ ಏರ್ಪಡಿಸಲು ಬಿಬಿಎಂಪಿ ನಿರ್ಧರಿಸಿದೆ.

ಶೃಂಗಸಭೆಯ ಮಾದರಿಯಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ವಾಯು ಮಾಲಿನ್ಯ ಕುರಿತು ವಿಚಾರ ವಿನಿಮಯ ನಡೆಯಲಿದ್ದು, ದೇಶ– ವಿದೇಶಗಳ ತಜ್ಞರು ಭಾಗವಹಿಸಲಿದ್ದಾರೆ. ಸಿ–40 ಒಕ್ಕೂಟದ ಸದಸ್ಯರನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸಲು ತೀರ್ಮಾನಿಸಲಾಗಿದೆ.

‘ಬೆಂಗಳೂರಿನ 18 ಕಡೆಗಳಲ್ಲಿ ವಾಯುಮಾಲಿನ್ಯದ ಪ್ರಮಾಣವನ್ನು ಅಳೆಯುವ ಮಾಪನಗಳನ್ನು ಅಳವಡಿಸಲಾಗಿದ್ದು, ನಗರದ ಒಂದು ಘನ ಮೀಟರ್‌ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಪ್ರಮಾಣ 125 ಮಿಲಿ ಗ್ರಾಂನಷ್ಟು ದಾಖಲಾಗಿದೆ. ಈ ಪ್ರಮಾಣ 100 ಮಿಲಿ ಗ್ರಾಂ ದಾಟಿದಲ್ಲಿ ಅಪಾಯ ಎದುರಾಗಲಿದೆ. ದೆಹಲಿಯಲ್ಲಿ ಈಗಾಗಲೇ ಈ ಪ್ರಮಾಣ ಅಪಾಯದ ಮಟ್ಟ ಮೀರಿದ್ದು, 800 ಮಿಲಿ ಗ್ರಾಂನಷ್ಟಿದೆ’ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಬೆಂಗಳೂರಿನ ಮುಂದಿನ ಕ್ರಮಗಳು

* ವಾಯುಗುಣಮಟ್ಟವನ್ನು ಸುಧಾರಿಸಲು ನಗರದ 50 ಪ್ರಮುಖ ರಸ್ತೆಗಳಲ್ಲಿ 4.5 ಮೀ. ಅಗಲದ ಪಾದಚಾರಿ ಮಾರ್ಗ ನಿರ್ಮಿಸುವುದು. ಅಪಘಾತವನ್ನು ಕಡಿಮೆ ಮಾಡುವುದು. ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು.

* ಖಾಸಗಿ ವಾಹನ ಬಿಟ್ಟು ಮೆಟ್ರೊ ರೈಲಿನಲ್ಲಿ ಸಂಚರಿಸುವಂತೆ ಉತ್ತೇಜನ ನೀಡುವುದು.

* ಮೆಟ್ರೊ ನಿಲ್ದಾಣಗಳಿಗೆ ಸಂಪರ್ಕ ಬಸ್‌ ಸೇವೆ ಒದಗಿಸುವುದು.

* ಸಾರ್ವಜನಿಕ ಸಾರಿಗೆಯ ಡೀಸೆಲ್‌ ಬಸ್‌ಗಳನ್ನು ಕಡಿಮೆ ಮಾಡಿ, ಹತ್ತು ವರ್ಷಗಳಲ್ಲಿ 12 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸುವುದು. 150 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಬಿಎಂಟಿಸಿ ಶೀಘ್ರದಲ್ಲೇ ಟೆಂಡರ್‌ ಕರೆಯಲಿದೆ.

* ಎಲ್ಲೆಂದರಲ್ಲಿ ಕಸ ಹಾಕುವವರು ಹಾಗೂ ಕಸ ಸುಡುವವರಿಗೆ ದಂಡ ವಿಧಿಸಲಾಗುತ್ತದೆ. ನಗರದಲ್ಲಿ ಶೇ 50ರಷ್ಟು ಕಸವನ್ನು ವಿಂಗಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT