ಬೆಂಗಳೂರು: ‘ರನ್ನನ ಗದಾಯುದ್ಧ ಮಹಾಕಾವ್ಯ ಪಾಶ್ಚಾತ್ಯ ಕಾವ್ಯ ಮಾದರಿಯಲ್ಲಿರುವ ಭಾರತದ ಏಕೈಕ ಮಹಾಕಾವ್ಯ’ ಎಂದು ಹಿರಿಯ ವಿದ್ವಾಂಸ ಪ್ರೊ. ಎಂ.ಎಚ್.ಕೃಷ್ಣಯ್ಯ ಪ್ರತಿಪಾದಿಸಿದರು.
ಬೆಂಗಳೂರು ಆಕಾಶವಾಣಿ, ಮುಧೋಳದ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ, ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ನಡೆದ ‘ಶ್ರೀ ಕವಿರತ್ನ ರನ್ನ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಭಾರತೀಯ ಕಾವ್ಯ ಮಾದರಿ ಸಾಂಪ್ರದಾಯಿಕವಾದುದು. ಆದರೆ, ಪಾಶ್ಚಾತ್ಯ ಕಾವ್ಯದಲ್ಲಿನ ಕಥೆ ಬಿಕ್ಕಟ್ಟಿನ ರೀತಿಯಲ್ಲಿ ತಟಕ್ಕನೆ ಆರಂಭವಾಗುತ್ತದೆ’ ಎಂದು ಅವರು ವಿಶ್ಲೇಷಿಸಿದರು.
‘ರನ್ನನ ಸಂಕಲ್ಪಶಕ್ತಿ ಪಂಪ ಕವಿಗಿಂತ ವಿಭಿನ್ನವಾದುದು. ಪಂಪನಿಗೆ ವೈದಿಕ ಪರಂಪರೆಯ ಹಿನ್ನೆಲೆ ಇತ್ತು. ರನ್ನನಿಗೆ ವಿದ್ಯಾದಾಹ ಇತ್ತು. ಎಲ್ಲ ವಿರೋಧದ ನಡುವೆಯೂ ಅವರು ವಿದ್ಯಾದಾಹ ತಣಿಸಿಕೊಂಡರು’ ಎಂದರು. ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ, ‘ಕೃತಜ್ಞತಾ ಭಾವ ರನ್ನ ಕವಿಯ ವಿಶೇಷ ಗುಣ. ತನಗೆ ಆಶ್ರಯ ನೀಡಿದವರ ಹೆಸರನ್ನೇ ಕವಿ ತನ್ನ ಮಕ್ಕಳಿಗೆ ಇಟ್ಟಿದ್ದರು. ಇಂತಹ ಗುಣ ಅಪರೂಪ’ ಎಂದು ಬಣ್ಣಿಸಿದರು.
‘ರನ್ನ ಶಾಸನ ಕವಿ. ಕನ್ನಡದಲ್ಲಿ ಸ್ತ್ರೀವಾದಕ್ಕೆ ಮೊದಲ ಭೂಮಿಕೆ ಒದಗಿಸಿದ ಕವಿಯೂ ಹೌದು. ಅಲ್ಲಿ ತನಕ ಮಹಿಳೆಯ ಶೃಂಗಾರವನ್ನು ಮಾತ್ರ ವರ್ಣಿಸಲಾಗುತ್ತಿತ್ತು. ರನ್ನ ಮಹಿಳೆಯ ಸಮಗ್ರ ಗುಣವಿಶೇಷಗಳನ್ನು ವರ್ಣಿಸಿದರು’ ಎಂದರು.
ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ‘ಹಳೆ ಕಾವ್ಯಗಳ ಓದುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇಂತಹ ಸ್ಥಿತಿ ಎಲ್ಲ ಕಾಲದಲ್ಲೂ ಇತ್ತು. ಪ್ರಾಚೀನ ಕಾವ್ಯಗಳನ್ನು ಪ್ರಸ್ತುತಗೊಳಿಸುವ ಕೆಲಸವನ್ನು ಜಾಸ್ತಿ ಮಾಡಿದರೆ ಓದುಗರ ಸಂಖ್ಯೆಯೂ ಹೆಚ್ಚುತ್ತದೆ. ಹೊಸ ವಿವೇಕದ ಮುಖಾಂತರ ಹಳೆಯ ಕವಿಗಳ, ಕಾವ್ಯಗಳ ಪ್ರವೇಶ ಮಾಡಿ ನಮ್ಮ ನಡುವೆ ಪ್ರಸ್ತುತಗೊಳಿಸುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದರು.
ಬೆಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಸಾದರ, ರನ್ನ ಪ್ರತಿಷ್ಠಾನದ ಡಾ.ಪದ್ಮಿನಿ ನಾಗರಾಜು ಮತ್ತಿತರರು ಇದ್ದರು. ಸುಮಾ ಪ್ರಸಾದ್ ಅವರು ರನ್ನನ ಕಾವ್ಯಗಳಿಂದ ಆಯ್ದ ಭಾಗಗಳ ಗಮಕ ವಾಚಿಸಿದರು.