ಬೆಂಗಳೂರು: ‘ಕರ್ನಾಟಕ ಕಾರಾಗೃಹ ಇಲಾಖೆ, ಸಂಕಲ್ಪ ಕಲಾಸಂಘದ ಸಹಯೋಗದೊಂದಿಗೆ ಏ.29 ಹಾಗೂ 30 ರಂದು ನಗರದ ರಂಗಶಂಕರದಲ್ಲಿ ‘ಜೈಲಿನಿಂದ– ಜೈಲಿಗೆ ರಂಗಯಾತ್ರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕಾರಾಗೃಹ ಇಲಾಖೆ ಎಡಿಜಿಪಿ ಕಮಲ್ ಪಂತ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಿವಿಧ ಅಪರಾಧಗಳನ್ನು ಮಾಡಿ ಜೈಲು ಸೇರುವವರ ಸಕರಾತ್ಮಕವಾಗಿ ಪರಿವರ್ತನೆ ಮಾಡಲು ರಂಗಭೂಮಿ ನೆರವಾಗುತ್ತಿದೆ. ಈ ಕಾರಣದಿಂದ ಪ್ರತಿವರ್ಷ ರಂಗಯಾತ್ರೆಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ’ ಎಂದರು.
‘ಕಳೆದ 15 ವರ್ಷಗಳಿಂದ 500ಕ್ಕೂ ಹೆಚ್ಚು ಕೈದಿಗಳು ರಂಗಕಲಾವಿದರು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಜೈಲಿನಿಂದ ಹೊರಗೆ ಹೋದ ಮೇಲೂ ರಂಗಭೂಮಿಯೊಂದಿಗೆ ನಿಕಟವಾದ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ’ ಎಂದು ಹೇಳಿದರು.
‘ಮೇ15 ರಿಂದ ಮೂರು ದಿನಗಳ ಕಾಲ ಮುಂಬೈನಲ್ಲಿ ಪ್ರದರ್ಶನ ನೀಡಲು ಕೈದಿಗಳ ರಂಗ ತಂಡಕ್ಕೆ ಆಹ್ವಾನ ಬಂದಿದೆ. ಈ ಕುರಿತು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಅವರು ತಿಳಿಸಿದರು.
ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಮಾತನಾಡಿ, ‘ಕೈದಿಗಳು ನಗರದಲ್ಲಿ ಏ.29ರಂದು ಜಯಂತ ಕಾಯ್ಕಿಣಿ ಅವರ ‘ಜತೆಗಿರುವ ಚಂದಿರ’ ಹಾಗೂ 30ರಂದು ಶೇಕ್ಸ್ಪಿಯರ್ ಅವರ ಮ್ಯಾಕ್ಬೆತ್ ಆಧಾರಿತ ‘ಮಾರನಾಯಕ’ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ’ ಎಂದು ತಿಳಿಸಿದರು.