ಬೆಂಗಳೂರು: ‘ಶೀಘ್ರ ಹಾಗೂ ಪಾರದರ್ಶಕ ನ್ಯಾಯದಾನಕ್ಕಾಗಿ ಸಮಗ್ರ ನ್ಯಾಯಾಂಗ ವ್ಯವಸ್ಥೆಯನ್ನೇ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನದ (ಐಸಿಟಿ) ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಪ್ರಕಟಿಸಿದರು. ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಘಟಿಕೋತ್ಸವ ಭಾಷಣ ಮಾಡಿದರು.
‘ಸಂವಿಧಾನ ಪ್ರತಿಪಾದಿಸುವ ಮೌಲ್ಯ ಹಾಗೂ ಆದರ್ಶಗಳು ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರತಿಫಲಿತವಾಗಬೇಕು ಎಂಬುದು ಕೇಂದ್ರದ ಕಳಕಳಿಯಾಗಿದೆ’ ಎಂದು ಹೇಳಿದರು. ‘ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಮತ್ತು ಸುಪ್ರೀಂ ಕೋರ್ಟ್ ಇ–ಸಮಿತಿ ಸಹಯೋಗದಲ್ಲಿ ನ್ಯಾಯಾಂಗ ವ್ಯವಸ್ಥೆ ಡಿಜಿಟಲೀಕರಣ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲದೆ ದೇಶದಲ್ಲಿರುವ ಸುಮಾರು 14 ಸಾವಿರ ಅಧೀನ ನ್ಯಾಯಾಲಯಗಳಿಗೂ ಐಸಿಟಿ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ವಿವರಿಸಿದರು.
‘ದೇಶದ ಎಲ್ಲ ವಕೀಲರ ದತ್ತಾಂಶ ಬ್ಯಾಂಕ್ ಅಭಿವೃದ್ಧಿ ಮಾಡಲೂ ನಿರ್ಧರಿಸಲಾಗಿದೆ. ಇದರಿಂದ ಅತ್ಯಂತ ಅರ್ಹ ಹಾಗೂ ಪ್ರತಿಭಾನ್ವಿತ ವಕೀಲರನ್ನು ಸುಲಭವಾಗಿ ಗುರುತಿಸಿ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಸಾಧ್ಯವಾಗಲಿದೆ’ ಎಂದು ಹೇಳಿದರು. ‘ನ್ಯಾಯಾಧೀಶರ ಕೊರತೆ ಹಾಗೂ ಮೂಲಸೌಕರ್ಯದ ಅಭಾವದಿಂದ ಬಾಕಿ ಪ್ರಕರಣಗಳ ಸಂಖ್ಯೆ ಬೆಳೆಯುತ್ತಲೇ ಇದೆ.
ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳಲ್ಲಿ 4,382 ಹುದ್ದೆಗಳು ಖಾಲಿ ಇವೆ. ಮಂಜೂರಾದ ಹುದ್ದೆಗಳ ನಾಲ್ಕನೇ ಒಂದು ಭಾಗದಷ್ಟು ಹುದ್ದೆಗಳು ಖಾಲಿ ಇರುವುದರಿಂದ ಪ್ರಕರಣಗಳ ಶೀಘ್ರ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ತಿಳಿಸಿದರು.
‘ಹೈಕೋರ್ಟ್ಗಳಿಗೆ ಮಂಜೂರಾದ ಹುದ್ದೆಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಖಾಲಿ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತದೆ’ ಎಂದು ಹೇಳಿದರು.
‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆಗೆ ಈಗಾಗಲೇ ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಸಿಕ್ಕಿದ್ದು, ನ್ಯಾಯಾಂಗ ಸುಧಾರಣೆಯಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ’ ಎಂದು ಸಚಿವರು ವ್ಯಾಖ್ಯಾನಿಸಿದರು. ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಬದಿಗಿಟ್ಟು ಅವರು ಮಾತನಾಡಿದರು. ವೈವಿಧ್ಯಮಯ ಕೋರ್ಸ್ ನೋಡಿ, ಮತ್ತೆ ಕಾನೂನು ವಿದ್ಯಾರ್ಥಿಯಾಗುವ ಆಸೆ ಮೂಡಿದೆ ಎಂದರು.
ರಾಷ್ಟ್ರೀಯ ಕಾನೂನು ಶಾಲೆಯ ಕುಲಾಧಿಪತಿಯೂ ಆಗಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ. ಆರ್. ವೆಂಕಟರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನ ಹಲವು ಹಾಲಿ ಹಾಗೂ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ವಕೀಲರ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕೈದಿಗಳ ದತ್ತಾಂಶ ನಿರ್ವಹಣೆ ವ್ಯವಸ್ಥೆ: ‘ಜೈಲುಗಳಲ್ಲಿರುವ ಶೇ 66ರಷ್ಟು ಮಂದಿ ವಿಚಾರಣಾಧೀನ ಕೈದಿಗಳು. ಅವರನ್ನು ಬಹುಕಾಲ ಕೂಡಿಡುವುದು ಮಾನವ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲ, ನಮ್ಮ ವಿಳಂಬ ನ್ಯಾಯದಾನ ವ್ಯವಸ್ಥೆಗೂ ದ್ಯೋತಕ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ವಿಷಾದ ವ್ಯಕ್ತಪಡಿಸಿದರು.
‘ಗರಿಷ್ಠ ಶಿಕ್ಷೆ ಪ್ರಮಾಣದ ಅರ್ಧದಷ್ಟು ಕಾಲವನ್ನು ಜೈಲಿನಲ್ಲಿ ಕಳೆದ ಕೈದಿಗಳ ಬಿಡುಗಡೆಗೆ ಅವಕಾಶ ಕಲ್ಪಿಸಲು ಕಾನೂನು (ಸಿಆರ್ಪಿಸಿ 436ಎ) ತಿದ್ದುಪಡಿ ಮಾಡಲಾಗಿದೆ. ಕೈದಿಗಳ ದತ್ತಾಂಶ ನಿರ್ವಹಣೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ವಿಚಾರಣಾಧೀನ ಕೈದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ದತ್ತಾಂಶದ ಆಧಾರದ ಮೇಲೆ ಯಾವ ಕೈದಿಗಳನ್ನು ಯಾವ ದಿನ ಬಿಡುಗಡೆ ಮಾಡಬೇಕು ಎನ್ನುವುದು ನಿರ್ಧಾರವಾಗಲಿದೆ’ ಎಂದು ವಿವರಿಸಿದರು.
‘ತಿಹಾರ್ ಜೈಲಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ದತ್ತಾಂಶ ನಿರ್ವಹಣೆ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅದೇ ಸೌಲಭ್ಯವನ್ನು ಉಳಿದ ಜೈಲುಗಳಿಗೂ ಒದಗಿಸಲಾಗುತ್ತದೆ’ ಎಂದು ಹೇಳಿದರು.
ಇವರು ‘ಪದವಿಗಳ ಶತಕ’ವೀರ!
ಬೆಂಗಳೂರು: ಅವರ ಹೆಸರು ಪಟ್ನಾಲ ಜಾನ್ ಸುಧಾಕರ್. ವಯಸ್ಸು 55. ಪಡೆದ ಪದವಿಗಳ ಸಂಖ್ಯೆ 100. ‘ಪದವಿಗಳ ಶತಕ’ವನ್ನೇ ಬಾರಿಸಿದರೂ ಅವರ ಅಧ್ಯಯನದ ದಾಹ ಇನ್ನೂ ಇಂಗಿಲ್ಲ! ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಭೋಪಾಲ ಕೇಂದ್ರದಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸುಧಾಕರ್ ಅವರು ರಾಷ್ಟ್ರೀಯ ಕಾನೂನು ಶಾಲೆ ಘಟಿಕೋತ್ಸವದಲ್ಲಿ ಭಾನುವಾರ ನಾಲ್ಕು ಪದವಿಗಳನ್ನು ಪಡೆದರು.
‘ಪದವಿಗಳ ಶತಕ’ ಬಾರಿಸಿ ಆಯಿತಲ್ಲ, ಇಲ್ಲಿಗೆ ಅಧ್ಯಯನದ ದಾಹ ಮುಗಿಯಿತೆ’ ಎಂದು ಕೇಳಿದರೆ, ‘ಇಲ್ಲ, ಇನ್ನೂ ಕೆಲವು ಕೋರ್ಸ್ಗಳ ಅಧ್ಯಯನ ನಡೆದಿದೆ. ಮತ್ತೆ ಕೆಲವು ಕೋರ್ಸ್ಗಳ ಪ್ರವೇಶಕ್ಕೆ ತಯಾರಿಯನ್ನೂ ನಡೆಸಿರುವೆ’ ಎನ್ನುತ್ತಾರೆ ಅವರು!
ಮೂಲತಃ ವಿಶಾಖಪಟ್ಟಣದ ಸುಧಾಕರ್ ಕಡು ಬಡತನದ ಕುಟುಂಬದಿಂದ ಬಂದವರು. ಅವರ ಅಪ್ಪ– ಅಮ್ಮ ಅನಕ್ಷರಸ್ಥರು. ‘ಬಡವರೂ ಶೈಕ್ಷಣಿಕವಾಗಿ ಏನೆಲ್ಲ ಸಾಧಿಸಬಹುದು ಎಂದು ತೋರಿಸುವ ಹಟದಿಂದಲೇ ಇಷ್ಟೊಂದು ಪದವಿ ಪಡೆಯಬೇಕಾಯಿತು’ ಎಂದು ಅವರು ಹೇಳುತ್ತಾರೆ.
ಕಾನೂನು ವಿಷಯದಲ್ಲಿ 40, ಸಮೂಹ ಸಂವಹನದಲ್ಲಿ 15, ವ್ಯವಸ್ಥಾಪನ, ಪರಿಸರ, ಮಾನವಿಕ, ಮಾನವ ಹಕ್ಕುಗಳ ಅಧ್ಯಯನ, ಮನಃಶಾಸ್ತ್ರ, ತತ್ವಜ್ಞಾನದ ವಿಷಯಗಳಲ್ಲಿ ತಲಾ ಐದು... ಅವರ ‘ಪದವಿ ಗಣಿತ’ ಹೀಗೇ ಮುಂದುವರಿಯುತ್ತದೆ.
200ಕ್ಕೂ ಅಧಿಕ ಕೃತಿಗಳನ್ನೂ ಅವರು ರಚಿಸಿದ್ದಾರೆ. ಪ್ರತಿಷ್ಠಿತ ಮದರ್ ತೆರೆಸಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.ಆಂಧ್ರಪ್ರದೇಶದಲ್ಲಿ ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.