ಬೆಂಗಳೂರು: ‘ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಲು ಶ್ರೇಷ್ಠ ಮನಸ್ಸುಗಳ ಜೊತೆಗೆ ಒಡನಾಟಕ್ಕೆ ಅವಕಾಶ ಕಲ್ಪಿಸಬೇಕು. ಇದಕ್ಕೆ ಇರುವ ಏಕೈಕ ಸಾಧನ ಪುಸ್ತಕಗಳು’ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರಕಾಶಕರ ಸಂಘ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ವಿಶ್ವ ಪುಸ್ತಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಮಾಜದಲ್ಲಿ ಇವತ್ತು ಶ್ರೇಷ್ಠ ಮನಸ್ಸುಗಳ ಜೊತೆಗಿನ ಒಡನಾಟ ಕಡಿಮೆ ಆಗಿದೆ. ಭ್ರಷ್ಟರು, ನೀಚರ ಜೊತೆಗಿನ ಒಡನಾಟವೇ ಜಾಸ್ತಿ ಆಗಿದೆ. ಅತ್ಯುತ್ತಮ ಪುಸ್ತಕಗಳು ನಮ್ಮ ಮನಸ್ಸಿಗೆ ಹೆಚ್ಚಿನ ಸಂಸ್ಕಾರ ನೀಡುತ್ತವೆ. ಪುಸ್ತಕಗಳ ಮೂಲಕ ಬೇಂದ್ರೆ, ಕುವೆಂಪು ಮತ್ತಿತರ ಸಾಹಿತಿಗಳ ಜೊತೆಗೆ ಸಂವಹನ ನಡೆಸಬಹುದು’ ಎಂದು ಪ್ರತಿಪಾದಿ ಸಿದರು.
ಪುಸ್ತಕಗಳ ಬಿಡುಗಡೆ ಮಾಡಿದ ಕವಿ ಡಾ.ಸಿದ್ದಲಿಂಗಯ್ಯ, ‘ಪೂರ್ವಿಕರ ಮನಸ್ಸು ಹಾಗೂ ನಮ್ಮ ಮನಸ್ಸಿನ ನಡುವಿನ ಸೇತುವೆಗಳು ಪುಸ್ತಕಗಳು. ಉತ್ತಮ ಪುಸ್ತಕಗಳನ್ನು ಓದಿದ ಬಳಿಕ ಅನೇಕ ಮಂದಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಪುಟ್ಟ ಗ್ರಂಥಾಲಯ ಆರಂಭಿಸಬೇಕು’ ಎಂದು ಸಲಹೆ ನೀಡಿದರು.