ಬಸವಕಲ್ಯಾಣ: ‘ತಾಲ್ಲೂಕಿಗೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 71 ರಷ್ಟು ಫಲಿತಾಂಶ ಪ್ರಾಪ್ತವಾಗಿದ್ದು, ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ್ ತಿಳಿಸಿದ್ದಾರೆ.
‘ಮೂರು ವರ್ಷಗಳ ಹಿಂದೆ ಶೇ 43 ರಷ್ಟು ಫಲಿತಾಂಶ ಬಂದಿತ್ತು. ಕಳೆದ ಸಾಲಿನಲ್ಲಿ ಶೇ 63ಕ್ಕೇರಿತು. ಈ ಸಲ ಅದಕ್ಕಿಂತ ಉತ್ತಮ ಫಲಿತಾಂಶ ಬಂದಿದೆ.
ಹಾರಕೂಡ ಗುರುಲಿಂಗ ಶಿವಾಚಾರ್ಯ ವಸತಿ ಶಾಲೆ, ಬಸವಕಲ್ಯಾಣದ ಜ್ಞಾನಪ್ರಿಯ ಪ್ರೌಢಶಾಲೆ, ಹುಲಸೂರನ ಎಕಬಾಲ್ ಪಟೇಲ್ ಪ್ರೌಢಶಾಲೆಗಳಿಗೆ ಶೇ 100 ರಷ್ಟು ಫಲಿತಾಂಶ ಪ್ರಾಪ್ತವಾಗಿದೆ. ರಾಜೋಳಾದ ಆದರ್ಶ ವಿದ್ಯಾಲಯ ಶೇ 98.64 ರಷ್ಟು ಫಲಿತಾಂಶ ಪಡೆದು ಸರ್ಕಾರಿ ಶಾಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದಿದ್ದಾರೆ.
ರಾಜೋಳಾ ಆದರ್ಶ ವಿದ್ಯಾಲಯದ ಸಾಗರ ವಿಜಯಕುಮಾರ ಶೇ 98.04 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಬಂದಿದ್ದಾರೆ. ಇದೇ ಪ್ರೌಢಶಾಲೆಯ ತುಕಾರಾಮ ದಿಲೀಪ ಶೇ 97.76 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಬಸವಕಲ್ಯಾಣದ ಎಸ್.ಬಿ.ಆರ್.ಪ್ರೌಢಶಾಲೆ ವಿದ್ಯಾರ್ಥಿ ವೈಭವ ಶೇ 97.76 ಅಂಕಗಳನ್ನು, ಆದರ್ಶ ವಿದ್ಯಾಲಯದ ಅಭಿಷೇಕ್ ವಿಠಲ್ ಶೇ 97.60 ಅಂಕ ಬಸವಕಲ್ಯಾಣದ ಜ್ಞಾನಪ್ರಿಯ ಪ್ರೌಢಶಾಲೆ ವಿದ್ಯಾರ್ಥಿನಿ ಚಾಮುಂಡಿ ಚಿರಡೆ ಶೇ 97.44 ಅಂಕ ಹಾಗೂ ಸಸ್ತಾಪುರ ರಾಮಲಿಂಗೇಶ್ವರ ಪ್ರೌಢಶಾಲೆಯ ಶ್ರೀಮಾ ತಾನಾಜಿ ಶೇ 97.28 ಅಂಕಗಳನ್ನು ಪಡೆದು ತಾಲ್ಲೂಕಿನಲ್ಲಿನ ಅತಿ ಹೆಚ್ಚು ಅಂಕ ಪಡೆದಿದ್ಧಾರೆ ಎಂದಿದ್ದಾರೆ.
ಪ್ರೌಢಶಾಲಾ ಶಿಕ್ಷಕರ ಸತತ ಪರಿಶ್ರಮ ಹಾಗೂ ನೋಡಲ್ ಅಧಿಕಾರಿಗಳ ನಿರಂತರ ಕಾಳಜಿಯ ಕಾರಣ ಮತ್ತು ತಾವು ಎಲ್ಲೆಡೆ ಸತತವಾಗಿ ಪರಿಶೀಲನೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದೂ ಹೇಳಿದ್ದಾರೆ.