ಜನವಾಡ: ವಿದ್ಯಾನಿಕೇತನ ಹಾಗೂ ಅರಳು ಸಂಸ್ಥೆ ವತಿಯಿಂದ ಇಮೆಜ್ ನೆಕ್ಸ್ಟ್ ಯೋಜನೆಯಡಿ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಹಿಂದುಗಡೆಯ ಅರಳು ಸಂಸ್ಥೆ ಕಚೇರಿಯಲ್ಲಿ 30 ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಯದಲಾಪುರ, ಮಂದಕನಳ್ಳಿ, ಅಯಾಸಪುರ, ಕಮಠಾಣ, ಮರ್ಜಾಪುರ, ಅಷ್ಟೂರ, ಮಲ್ಕಾಪುರ ಸೇರಿ ಬೀದರ್ ತಾಲ್ಲೂಕಿನ 30 ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಕೋವಿಡ್ ಸುರಕ್ಷತಾ ಕಿಟ್ ವಿತರಿಸಲಾಗಿದೆ ಎಂದು ವಿದ್ಯಾನಿಕೇತನ ಇಮೆಜ್ ಯೋಜನೆಯ ಕಲಬುರ್ಗಿ ವಿಭಾಗೀಯ ಸಂಚಾಲಕ ಡಾ. ಕೆ.ಟಿ. ಮೆರಿಲ್ ತಿಳಿಸಿದರು.
ಆರು ತಿಂಗಳ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಜೀವನೋಪಾಯ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಲಿಗೆ ಯಂತ್ರಗಳನ್ನು ಕೊಡಲಾಗಿದೆ. ಮಹಿಳೆಯರು ಹೊಲಿಗೆ ಕಾಯಕದ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮಹಿಳೆಯರು ಯಾರನ್ನೂ ಅವಲಂಬಿಸಬಾರದು. ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಅರಳು ಸಂಸ್ಥೆಯ ಸಹ ನಿರ್ದೇಶಕಿ ಸುನಿತಾ, ಸ್ವಯಂ ಸೇವಕರಾದ ಯೋಹಾನ್, ಸುರೇಕಲಾ, ಕವಿತಾ, ಅಂಜಮ್ಮ ಇದ್ದರು.