ಹುಮನಬಾದ್: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶಿವಪ್ರಕಾಶ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಿತ್ರಾಬಾಯಿ ಜಮಾದಾರ ಮಾತನಾಡಿ,‘ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರಿಗೆ ಎಲ್ಐಸಿ ಆಧರಿತ ನಿವೃತ್ತಿ ಸೌಲಭ್ಯ ಒದಗಿಸಬೇಕು.ಮೀಸಲಾತಿ ಮತ್ತು ಸೇವಾ ಹಿರಿತನದ ಆಧಾರದ ಮೇಲೆ ಮೇಲ್ವಿಚಾರಕಿಯರ ಹುದ್ದೆಗೆ ಮುಂಬಡ್ತಿ ನೀಡಬೇಕು’ ಎಂದು ಒತ್ತಾಯಿಸಿದರು.
ಅಂಗನವಾಡಿ ಸಹಾಯಕಿಯರಿಗೆ ಕಾರ್ಯಕರ್ತೆಯಾಗಿ ಮುಂಬಡ್ತಿ ನೀಡುವಾಗ ನಿಗದಿಪಡಿಸಿರುವ ವಯೋಮಿತಿಯನ್ನು ತೆಗೆಯಬೇಕು. ಖಾಯಂ ಮಾಡುವ ತನಕ ಸೇವಾ ಜೇಷ್ಠತೆ ಆಧಾರದ ಮೇಲೆ ಕಾರ್ಯಕರ್ತೆಯರಿಗೆ ₹30 ಸಾವಿರ ಮತ್ತು ಸಹಾಯಕಿಯರಿಗೆ ₹21 ಸಾವಿರ ಪ್ರೋತ್ಸಾಹಧನ ನೀಡಬೇಕು. ಖಾಲಿ ಇರುವ ಸಹಾಯಕಿಯರು ಹಾಗೂ ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಉಷಾ ಗುತ್ತೇದಾರ, ಕೋಶಾಧ್ಯಕ್ಷೆ ವಿಜಯಲಕ್ಷ್ಮಿ ಕಲ್ಲೂರು, ಜಗದೇವಿ ಪತ್ರಿ, ಆಶಾ ಬಡ್ದಾಳೆ, ಭಾರತಿ, ಶ್ವೇತಾ, ಪಾರ್ವತಿ ಹಾಗೂ ಜೈಶೀಲಾ ಇದ್ದರು.