ಬೀದರ್: ಪಶ್ಚಿಮ ಬಂಗಾಳದಲ್ಲಿ ಅಮಾಯಕ ಹಿಂದೂಗಳ ಹತ್ಯೆಯನ್ನು ಖಂಡಿಸಿ ಬಜರಂಗ ದಳದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಪಶ್ಚಿಮಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಬಂಧುಪ್ರಕಾಶಪಾಲ್ ಅವರ ಗರ್ಭಿಣಿ ಪತ್ನಿ ಹಾಗೂ 8 ವರ್ಷದ ಮಗುವನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಹಿಂದೂ ಸಮಾಜವನ್ನು ಆತಂಕಕ್ಕೀಡು ಮಾಡಿದೆ ಎಂದು ದೂರಿದರು.
ಬಾಂಗ್ಲಾ ನುಸುಳುಕೋರರ ಓಟಿನ ಆಸೆಗಾಗಿ ಮಮತಾ ಸರ್ಕಾರವು, ನುಸುಳುಕೋರರ ಕಾನೂನು ವಿರೋಧಿ ಕೃತ್ಯಗಳ ಬಗ್ಗೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ಷಡ್ಯಂತ್ರ, ಕುತಂತ್ರ, ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಇವುಗಳಿಗೆ ಅಲ್ಲಿನ ಸರ್ಕಾರ ಮುಕ್ತ ಬೆಂಬಲ ಕೊಡುತ್ತಿದೆ ಎಂದು ಆಪಾದಿಸಿದರು.
ಪಶ್ಚಿಮ ಬಂಗಾಳ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು. ಬಂಧುಪ್ರಕಾಶ ಪಾಲ್ ಪರಿವಾರದ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪಶ್ಚಿಮ ಬಂಗಾಳದಲ್ಲಿ ಎನ್.ಆರ್.ಸಿ. ಜಾರಿಗೊಳಿಸಿ, ಬಾಂಗ್ಲಾ ನುಸುಳುಕೋರರನ್ನು ಮರಳಿ ಆ ದೇಶಕ್ಕೆ ಕಳುಹಿಸಬೇಕು. ಪಶ್ಚಿಮ ಬಂಗಾಳದಲ್ಲಿನ ರಾಷ್ಟ್ರವಿರೋಧಿ ಹಾಗೂ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಜರಂಗ ದಳದ ಜಿಲ್ಲಾ ಸಂಯೋಜಕ ಸುನೀಲ ದಳವೆ, ಸತೀಶ ಪಾರಾ, ವೀರೂ ಠಾಕೂರ, ವೀರೇಶ ಸ್ವಾಮಿ, ಪವನ್ ನೌಬಾದ್, ಪವನ್ ಹೆಗ್ಗೆ, ರವಿ ಕೋಡಗೆ, ಅರವಿಂದ ರೆಡ್ಡಿ, ಸಿದ್ದಾರೆಡ್ಡಿ, ವೆಂಕಟೇಶ, ರಾಹುಲ್ ಪ್ರಕಾಶ, ಮಲ್ಲಿಕಾರ್ಜುನ ಮೊದಲಾದವರು ಪಾಲ್ಗೊಂಡಿದ್ದರು.