ಭಾಲ್ಕಿ: ‘ಬಸವ ಜಯಂತಿಯಂದು ಏಕಕಾಲಕ್ಕೆ 5 ಸಾವಿರ ಬಾಲಬಸವಣ್ಣ ವೇಷಧಾರಿಗಳನ್ನು ಸಿದ್ಧಪಡಿಸುತ್ತಿರುವ ಹಿರೇಮಠ ಸಂಸ್ಥಾನದ ಕಾರ್ಯ ದೇಶಕ್ಕೆ ಮಾದರಿ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಇಲ್ಲಿಯ ಚನ್ನಬಸವಾಶ್ರಮದಲ್ಲಿ ಶುಕ್ರವಾರ ಬಾಲಬಸವಣ್ಣ ವೇಷಧಾರಿಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಬಸವಣ್ಣನವರ ತತ್ವ, ಚಿಂತನೆ, ಆದರ್ಶ ಗುಣಗಳು, ಒಳ್ಳೆಯ ಸಂಸ್ಕಾರ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಬೆಳೆಯಬೇಕು ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಪೋಷಕರು, ಆಯೋಜಕರು ಮಕ್ಕಳ ಆರೋಗ್ಯ, ಸುರಕ್ಷತೆ ಕಡೆಗೆ ವಿಶೇಷ ಗಮನ ಹರಿಸಬೇಕು. ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ,‘ಬಸವಾದಿ ಶರಣರ ಉತ್ಕೃಷ್ಟ ಪರಂಪರೆಯ ಶ್ರೇಷ್ಠ ತತ್ವಗಳನ್ನು ಮಕ್ಕಳು ಸೇರಿದಂತೆ ಸಮಾಜಕ್ಕೆ ಪರಿಚಯಿಸಬೇಕು ಎಂಬ ಸಂಕಲ್ಪದೊಂದಿಗೆ ಬಾಲಬಸವಣ್ಣ ವೇಷಧಾರಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಪೋಷಕರು, ಭಕ್ತರು ಸಹಕರಿಸಬೇಕು’ ಎಂದರು.
ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಬಾಲಬಸವಣ್ಣ ವೇಷಧಾರಿ ಸಮಿತಿ ಅಧ್ಯಕ್ಷೆ ಶುಭಾಂಗಿ ಚನ್ನಬಸವಣ್ಣ ಬಳತೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಬಿ.ಜಿ ಪಾಟೀಲ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ವಿಶ್ವನಾಥಪ್ಪ ಬಿರಾದಾರ, ಕಾಶಿನಾಥ ಕೊಡುಗೆ, ಈಶ್ವರ ರುಮ್ಮಾ ಹಾಗೂ ನಾಗೇಶ ತಮಾಸಂಗೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.