ಬೀದರ್: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ)ಯು ಇಲ್ಲಿಯ ತನ್ನ ಅಧೀನದ ಸಂರಕ್ಷಿತ ಸ್ಮಾರಕಗಳು, ಪ್ರವಾಸಿ ತಾಣಗಳು ಮತ್ತು ವಸ್ತು ಸಂಗ್ರಹಾಲಯ ತೆರೆಯಲು ಅನುಮತಿ ನೀಡಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದ ಎಎಸ್ಐ ರಕ್ಷಿತ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ವಿಧಿಸಿ ಎಎಸ್ಐ ನಿರ್ದೇಶಕ ಎನ್.ಕೆ. ಪಾಠಕ್ ಏಪ್ರಿಲ್ 15ರಂದು ಆದೇಶ ಹೊರಡಿಸಿದ್ದರು. ಜೂನ್ 14 ರಂದು ನಿರ್ಬಂಧ ತೆರವುಗೊಳಿಸಿ ಮರು ಆದೇಶ ಹೊರಡಿಸಿದ್ದಾರೆ.
ನಿರ್ಬಂಧದಿಂದಾಗಿ ಎರಡು ತಿಂಗಳು ಕೋಟೆ ಬಾಗಿಲು ಮುಚ್ಚಲಾಗಿತ್ತು. ಕೆಲ ಕಡೆ ಸ್ಮಾರಕಗಳ ಪ್ರವೇಶ ದ್ವಾರದಲ್ಲಿ ಪ್ರವೇಶದ ಮೇಲೆ ನಿರ್ಬಂಧ ಹೇರಿದ ಪತ್ರ ಅಂಟಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೆಲವು ಷರತ್ತು ವಿಧಿಸಿ ಜೂನ್ 16ರಿಂದ ಸ್ಮಾರಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
‘ಪ್ರವಾಸಿಗರು ಒಂದು ವಾರದ ಅವಧಿಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆ ಅವಧಿಯಲ್ಲಿ ಬರುವುದು ಸೂಕ್ತ. ಸ್ಮಾರಕ ಪ್ರವಾಸಿಗರು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಸ್ಮಾರಕಗಳನ್ನು ವೀಕ್ಷಿಸಬಹುದು’ ಎಂದು ಬೀದರ್ನ ಎಎಸ್ಐ ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ತಿಳಿಸಿದ್ದಾರೆ.