ಕಮಲನಗರ :ಯೇಸು ಕ್ರಿಸ್ತನ ಜನ್ಮ ದಿನದ ಅಂಗವಾಗಿ ಬುಧವಾರ ಪಟ್ಟಣದ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ತಾಲ್ಲೂಕಿನಾದ್ಯಂತ ಕ್ರಿಸ್ಮಸ್ ಹಬ್ಬ ಸಡಗರದಿಂದ ಆಚರಿಸಲಾಯಿತು.
ಮಂಗಳವಾರ ರಾತ್ರಿ 12 ಗಂಟೆಯಿಂದಲೇ ಚರ್ಚ್ಗಳಲ್ಲಿ ಯೇಸುವಿನ ಆಗಮನ ಕುರಿತು ಪಟಾಕಿ ಸಿಡಿಸಿ ಸಂಭ್ರಮದಿಂದ ಆಚರಿಸಿದರೆ, ಬುಧವಾರ ಬೆಳಿಗ್ಗೆಯಿಂದ ಎಲ್ಲಾ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಡಿಎಸ್.ಗಿರೀಶ ಗಾಯಕವಾಡ್ ನೇತ್ರತ್ವದಲ್ಲಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೇಸು ಕ್ರಿಸ್ತನ ಮಹಿಮೆ ಅಪಾರ. ಯೇಸುವಿನ ಸನ್ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಯಾರಿಗೂ ಮೋಸ ಮಾಡದೇ ಸತ್ಯದ ಮಾರ್ಗ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಂತಾಕ್ಲಾಸ್ ಆಕೃತಿ ಮತ್ತು ವಿವಿಧ ಶಾಂತಿ ಸಂದೇಶಗಳ ಮಾದರಿಗಳನ್ನು ನಿರ್ಮಿಸಿ ನೋಡುಗರ ಕಣ್ಮನ ಸೆಳೆಯಿತು.
ತಾಲ್ಲೂಕಿನ ಡಿಗ್ಗಿ, ಮದನೂರು, ಖತಗಾಂವ್, ಸೋನಾಳ, ಡೋಣಗಾಂವ್, ಮುಧೋಳ, ಹೊಳಸಮುದ್ರ, ಠಾಣಾಕುಶನೂರು, ಹಂದಿಕೇರಾ, ದಾಬಕಾ ವಿವಿಧ ಗ್ರಾಮಗಳಲ್ಲಿ ಕ್ರಿಶಿಯನ್ ಅನುಯಾಯಿಗಳು ಹೊಸ ಬಟ್ಟೆ ತೊಟ್ಟು ಹಬ್ಬದ ಸಂಭ್ರಮ ಮೆರೆದರು.
ಸುಶೀಲ ಘಾಗರೆ, ನಿಲೇಶ ಘಾಗರೆ, ಲಕ್ಷ್ಮಣ ಗಾಗರೆ, ಶ್ರಾವಣ ಘಾಗರೆ, ಶಿವಾ ಚವಾಣ್, ಆರ್.ಟಿ.ಕಾಂಬಳೆ, ಜೀವನ ಸೂರ್ಯವಂಶಿ, ದಯಾನಂದ, ಸ್ಯಾಮುಯೆಲ್, ಅವಿನಾಶ ಚವಾಣ್ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.