ಬೀದರ್: ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ಎಲ್ಲ ರಂಗಗಳಲ್ಲೂ ದೇಶದ ಪರಿಪೂರ್ಣ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸಲಹೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ಜನ ಜಾತಿ, ಧರ್ಮ, ಪಂಥ, ಪಂಗಡ, ಭಾಷೆಗಳನ್ನು ಮೀರಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಮನೆ ಮನೆಗಳ ಮೇಲೂ ರಾಷ್ಟ್ರ ಧ್ವಜ ಹಾರಿಸಿ, ವಿಶ್ವಕ್ಕೆ ತಮ್ಮ ರಾಷ್ಟ್ರಪ್ರೇಮವನ್ನು ಪರಿಚಯಿಸಿದ್ದಾರೆ ಎಂದು ಹೇಳಿದ್ದಾರೆ.
ಆಗಸ್ಟ್ 13 ರಿಂದ 15 ವರೆಗೆ ಮಾತ್ರ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಇತ್ತು. ಕಾರಣ, ಸಾರ್ವಜನಿಕರು ತಮ್ಮ ಮನೆ, ಅಂಗಡಿ, ವಾಹನಗಳ ಮೇಲೆ ಅಳವಡಿಸಿದ ಧ್ವಜಗಳನ್ನು ಕೆಳಗಿಳಿಸಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.