ಬೀದರ್: ಬರಗಾಲದಿಂದ ತತ್ತರಿಸಿರುವ ರೈತರಿಗೆ ಬರ ಪರಿಹಾರದ ಮೊತ್ತ ಜಮೆ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚುರುಕಿನಿಂದ ನಡೆದಿದೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಶೇಕಡಾ ತಲಾ 50ರ ಅನುಪಾತದಲ್ಲಿ ಜಿಲ್ಲೆಗೆ ಒಟ್ಟು ₹117.75 ಕೋಟಿ ಪರಿಹಾರ ಮೊತ್ತ ಬಿಡುಗಡೆಯಾಗಿದೆ. ಮಾರ್ಗಸೂಚಿ ಪ್ರಕಾರ, ಪ್ರತಿ ಹೆಕ್ಟೇರ್ಗೆ ₹8,600 ಪರಿಹಾರ ನಿಗದಿಪಡಿಸಲಾಗಿದೆ. ಇದರ ಅನ್ವಯ, ಮೊದಲ ಹಂತದಲ್ಲಿ ಪ್ರತಿ ಹೆಕ್ಟೇರ್ಗೆ ನಿಗದಿಪಡಿಸಿರುವ ₹8,600ರಲ್ಲಿ ₹2 ಸಾವಿರ ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಇನ್ನುಳಿದ ₹6,600 ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡದೇ ಇರುವುದು ಮತ್ತು ಹೆಸರುಗಳು ತಾಳೆಯಾಗದ ಕಾರಣ ಇನ್ನೂ ಜಿಲ್ಲೆಯ 11,075 ರೈತರಿಗೆ ಪರಿಹಾರ ಸೇರಬೇಕಿದೆ. ಈಗಾಗಲೇ ಜಿಲ್ಲೆಯ 1.50 ಲಕ್ಷ ರೈತರಿಗೆ ಪರಿಹಾರ ವಿತರಿಸಲಾಗಿದೆ.
‘ಜಿಲ್ಲೆಯ ಒಟ್ಟು 11,075 ರೈತರ ಬ್ಯಾಂಕ್ ಖಾತೆಗಳಿಗೆ ವಿವಿಧ ಕಾರಣಗಳಿಂದ ಪರಿಹಾರ ಮೊತ್ತ ಜಮೆಯಾಗಿಲ್ಲ. ಇಂತಹ ರೈತರ ಪಟ್ಟಿ ಸಿದ್ಧಪಡಿಸಲಾಗಿದೆ. ಯಾರ ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಸಂಖ್ಯೆ ಜೋಡಿಸಿಲ್ಲ. ಅವರು ಬ್ಯಾಂಕುಗಳಿಗೆ ಭೇಟಿ ಕೊಟ್ಟು ಪ್ರಕ್ರಿಯೆ ಮುಗಿಸಬೇಕು. ‘ಫ್ರೂಟ್ಸ್’ ತಂತ್ರಾಂಶದಲ್ಲಿ ಹೆಸರು ತಾಳಯಾಗದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಕೊಟ್ಟು ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
‘ಬರದಿಂದ ಉದ್ದು, ಹೆಸರು, ಸೋಯಾಬೀನ್ ಹಾಗೂ ತೊಗರಿ ಬೆಳೆಗಳು ಜಿಲ್ಲೆಯಲ್ಲಿ ಹಾಳಾಗಿದ್ದವು. ಈಗಾಗಲೇ ಮೊದಲನೆ ಕಂತಿನಲ್ಲಿ ಗರಿಷ್ಠ ₹2 ಸಾವಿರ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಆಯಾ ಬೆಳೆಗಳಿಗೆ ನಿಗದಿಪಡಿಸಿದ ಪ್ರಕಾರ ಪರಿಹಾರ ಧನ ಜಮೆ ಮಾಡಲಾಗುತ್ತಿದೆ. ಒಂದು ವೇಳೆ ಯಾರಿಗಾದರೂ ಪರಿಹಾರ ಜಮೆಯಾಗದೇ ಇದ್ದಲ್ಲಿ ರೈತರು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಥವಾ ತಹಶೀಲ್ದಾರ್ ಕಚೇರಿಯಲ್ಲಿರುವ ಪ್ರಕೃತಿ ವಿಕೋಪ ಶಾಖೆಗೆ ಭೇಟಿ ನೀಡಿ ಪರಿಹಾರ ಪಡೆದುಕೊಳ್ಳಬಹುದು’ ಎಂದು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ರೈತರಿಗೆ ಮೊದಲ ಕಂತಿನಲ್ಲಿ ₹2 ಸಾವಿರ ಎರಡನೇ ಕಂತಿನಲ್ಲಿ ₹6600 ಪರಿಹಾರ ಅವರ ಖಾತೆಗೆ ಜಮೆ ಮಾಡಲಾಗಿದೆ.–ಗೋವಿಂದ ರೆಡ್ಡಿ ಜಿಲ್ಲಾಧಿಕಾರಿ ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.